
ಧಾರವಾಡ, ಜೂ.30: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ಧಾರವಾಡ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ-ಮನೆಗೆ ಭೇಟಿ ನೀಡಿ ಏಣಿಕೆ, ಗಣತಿ ನಮೂನೆಗಳ ವಿತರಣೆಯನ್ನು ಆರಂಭಿಸಿದ್ದಾರೆ.
ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿರುವ ಈ ಅಭಿಯಾನದ ಮೊದಲ ದಿನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.0.92ರಷ್ಟು ಏಣಿಕೆ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದ್ದು, ಶೇ.0.02ರಷ್ಟು ಭರ್ತಿ ಮಾಡಿದ ನಮೂನೆಗಳನ್ನು ಮತದಾರರಿಂದ ಸ್ವೀಕರಿಸಲಾಗಿದೆ.
ಕ್ಷೇತ್ರವಾರು ಮಾಹಿತಿ ಪ್ರಕಾರ, ನವಲಗುಂದ ಕ್ಷೇತ್ರದಲ್ಲಿ ಶೇ.1.08 ನಮೂನೆಗಳನ್ನು ವಿತರಿಸಿ ಶೇ.0.03 ನಮೂನೆಗಳನ್ನು ಸ್ವೀಕರಿಸಲಾಗಿದೆ. ಕುಂದಗೋಳದಲ್ಲಿ ಶೇ.0.46, ಧಾರವಾಡದಲ್ಲಿ ಶೇ.0.17 ವಿತರಿಸಿ ಶೇ.0.02 ಸ್ವೀಕರಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ಶೇ.1.49, ಕೇಂದ್ರ ಕ್ಷೇತ್ರದಲ್ಲಿ ಶೇ.0.96 ವಿತರಿಸಿ ಶೇ.0.01 ಸ್ವೀಕರಿಸಲಾಗಿದೆ. ಪಶ್ಚಿಮ ಕ್ಷೇತ್ರದಲ್ಲಿ ಶೇ.1.71 ವಿತರಿಸಿ ಶೇ.0.03 ಹಾಗೂ ಕಲಘಟಗಿಯಲ್ಲಿ ಶೇ.0.27 ವಿತರಿಸಿ ಶೇ.0.01 ನಮೂನೆಗಳನ್ನು ಸ್ವೀಕರಿಸಲಾಗಿದೆ.
ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಮತದಾರರು ಏಣಿಕೆ, ಗಣತಿ ನಮೂನೆಗಳನ್ನು ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿ ಬಿಎಲ್ಒಗಳಿಗೆ ಸಲ್ಲಿಸಿ ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

