

ಧಾರವಾಡ: ಜಾನಪದ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರವೇ ಪ್ರಧಾನವಾಗಿದ್ದು, ಅವರ ಜೀವನಾನುಭವಗಳೇ ಜಾನಪದ ಹಾಡುಗಳಾಗಿ ರೂಪುಗೊಂಡಿವೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಜ್ಯೋತಿ ಪಾಟೀಲ್ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಜಯಶ್ರೀ ಗುತ್ತಲ ದತ್ತಿ ಕಾರ್ಯಕ್ರಮದಲ್ಲಿ ‘ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-೨೦೨೫’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಗ್ರಾಮೀಣ ಬದುಕಿನ ಒಳನೋಟಗಳೇ ಜಾನಪದ ಸಾಹಿತ್ಯದಲ್ಲಿವೆ. ತಮ್ಮ ಬದುಕಿನ ನೋವು-ನಲಿವುಗಳನ್ನು ಹಾಡಿನ ಮೂಲಕ ಹೊರಹಾಕಿ ಮಹಿಳೆಯರು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕುಟುಂಬ ನಿರ್ವಹಣೆಯ ಜೊತೆಗೆ ಮಹಿಳೆಯರು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಪೂರ್ಣಾ ಪಾಟೀಲ ಮಾತನಾಡಿ, ಜಾನಪದ ಸಾಹಿತ್ಯವು ಜನಪದರ ಜೀವನದ ಸಮಗ್ರ ಚಿತ್ರಣ ನೀಡುತ್ತದೆ. ಕುಟ್ಟುವಾಗ, ಬೀಸುವಾಗ, ಮದುವೆ ಹಾಗೂ ಹಬ್ಬಗಳಲ್ಲಿ ಮಹಿಳೆಯರು ಹಾಡುವ ಹಾಡುಗಳಲ್ಲಿ ತವರುಮನೆ ಸಿರಿ, ಹೆಣ್ಣುಮಕ್ಕಳ ನೈಜ ಬದುಕು ಅನಾವರಣಗೊಂಡಿದೆ. ಜೀವನದ ನೈಜತೆಯೇ ಜಾನಪದದಲ್ಲಿದೆ. ಮಹಿಳೆಯರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಾ. ಹನಮಂತ ಡಂಬಳ ಮಾತನಾಡಿ, ಜಯಶ್ರೀ ಗುತ್ತಲ ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ, ಎಸ್.ಬಿ. ಗುತ್ತಲ ಅವರು ದತ್ತಿ ಇಡುವ ಮೂಲಕ ಅವರನ್ನು ಸ್ಮರಿಸುತ್ತಾ ಜೀವಂತವಾಗಿರಿಸಿದ್ದಾರೆ. ಸಂಗೀತ ಪರಂಪರೆಯ ಹಿನ್ನೆಲೆಯಿದ್ದ ಕಾರಣ ಜಯಶ್ರೀ ಗುತ್ತಲ ಅವರಿಗೆ ಜಾನಪದದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿದರು. ಎಲ್ಲ ಮಹಿಳಾ ಮಂಡಳಗಳ ಹಾಡುಗಳನ್ನು ಕೇಳಿ ಸಂತೋಷವಾಯಿತು ಎಂದು ಅವರು ಹೇಳಿದರು.
ವಾಗ್ದೇವಿ ಮಹಿಳಾ ಮಂಡಳಕ್ಕೆ ಪ್ರಥಮ ಸ್ಥಾನ
ಕಾರ್ಯಕ್ರಮದ ಅಂಗವಾಗಿ ನಡೆದ ಮೂಲ ಜಾನಪದ ಹಾಡುಗಳ ಸ್ಪರ್ಧೆಯನ್ನು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ಒಟ್ಟು 36 ಮಹಿಳಾ ಮಂಡಳಗಳು ಭಾಗವಹಿಸಿದ್ದವು.
ಹುಬ್ಬಳ್ಳಿಯ ವಾಗ್ದೇವಿ ಮಹಿಳಾ ಮಂಡಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ‘ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-೨೦೨೫’ನ್ನು ತಮ್ಮದಾಗಿಸಿಕೊಂಡಿತು. ಹುಬ್ಬಳ್ಳಿ ಶ್ರೀಗೌರಿ ಭಜನಾ ಮಂಡಳ ದ್ವಿತೀಯ ಹಾಗೂ ಧಾರವಾಡದ ರುಕ್ಮಿಣಿ ಪಾಂಡುರಂಗ ಭಜನಾ ಮಂಡಳಿ ತೃತೀಯ ಬಹುಮಾನ ಪಡೆದವು.
ಧಾರವಾಡದ ತುಂಗಭದ್ರಾ ಮಹಿಳಾ ವೇದಿಕೆ, ಗಾನ ಚಿಂತನಾ ಮಹಿಳಾ ಮಂಡಳ ಮತ್ತು ಶ್ರೀರಾಮ ಜಯರಾಮ ಗುಂಪು ಮಹಿಳಾ ಮಂಡಳಕ್ಕೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.
ಸ್ಪರ್ಧೆಯ ತೀರ್ಪುಗಾರರಾಗಿ ಎನ್.ಆರ್. ಕುಲಕರ್ಣಿ, ವಿಜಯೇಂದ್ರ ಅರ್ಚಕ ಮತ್ತು ಶ್ರುತಿ ಕುಲಕರ್ಣಿ ಆಗಮಿಸಿದ್ದರು.
ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕೃತಿಕಾ ಸತ್ಯಬೋಧ ಗುತ್ತಲ ಅವರು ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ದತ್ತಿ ದಾನಿ ಎಸ್.ಬಿ. ಗುತ್ತಲ ಅವರು ದತ್ತಿಯ ಕುರಿತು ಮಾತನಾಡಿದರು.
ಶಂಕರ ಕುಂಬಿ ಸ್ವಾಗತಿಸಿದರು. ವಿಶ್ವೇಶ್ವರಿ ಬಿ. ಹಿರೇಮಠ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಶ್ರೀಧರ ಕುಲಕರ್ಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

