

ಶಿಗ್ಗಾಂವಿ: ಮೂರು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಗೆ ಬಂಕಾಪುರ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡ ಸೋರುತ್ತಿದ್ದು, ಚಿಕಿತ್ಸೆಗಾಗಿ ಬರುವ ರೋಗಿಗಳು ಮತ್ತಷ್ಟು ಸಂಕಟಕ್ಕೆ ಸಿಲುಕಿದ್ದಾರೆ. ಇದು ಕೇವಲ ಗೋಡೆಗಳಿಂದ ನೀರು ಸೋರುತ್ತಿರುವ ವಿಷಯವಲ್ಲ, ಬದಲಾಗಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೋಗಿಗಳ ಆರೋಗ್ಯ ಮತ್ತು ಸುರಕ್ಷತೆ ಅಪಾಯಕ್ಕೊಳಗಾಗಿರುವ ಗಂಭೀರ ಸಮಸ್ಯೆಯಾಗಿದೆ.
ಆಸ್ಪತ್ರೆಯ ಜನರಲ್ ವಾರ್ಡ್ನ ಹಾಸಿಗೆಗಳ ಬಳಿಯೇ ನೀರು ತೊಟ್ಟಿಕ್ಕುತ್ತಿರುವುದರಿಂದ ರೋಗಿಗಳು ತಮ್ಮ ರೋಗದ ನೋವಿನ ಜೊತೆಗೆ ಸೋರುತ್ತಿರುವ ಕಟ್ಟಡದ ಕಿರಿಕಿರಿಯನ್ನೂ ಸಹಿಸಿಕೊಳ್ಳುವಂತಾಗಿದೆ. ಗ್ರಾಮೀಣ ಭಾಗದ ಜನರಿಗೆ ಇದೇ ಆಸ್ಪತ್ರೆ ಏಕೈಕ ಆಸರೆಯಾಗಿದ್ದು, ಹೀಗೆ ವ್ಯವಸ್ಥೆ ಇಲ್ಲದೆ ಇರುವುದು ನಿಜಕ್ಕೂ ದುರಂತ. ಆಸ್ಪತ್ರೆಯ ನಡುವೆ ಮಳೆ ನೀರು ನಿಂತು ಸ್ವಚ್ಛತೆಗೂ ಧಕ್ಕೆಯುಂಟಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲಸೌಕರ್ಯಗಳ ಕೊರತೆ ಮತ್ತು ಸಿಬ್ಬಂದಿ ವರ್ಗಾವಣೆ
ಕೇವಲ ಸೋರುವ ಕಟ್ಟಡ ಮಾತ್ರವಲ್ಲದೆ, ಬಂಕಾಪುರ ಆಸ್ಪತ್ರೆ ಹಲವು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ವೈದ್ಯರು, ಸ್ಟಾಫ್ ನರ್ಸ್ಗಳು ಮತ್ತು ಸ್ವಚ್ಛತಾ ಸಿಬ್ಬಂದಿಯ ಕೊರತೆಯಿಂದ ರೋಗಿಗಳನ್ನು ನಿರ್ವಹಿಸುವುದು ಕಷ್ಟವಾಗಿದೆ.
30 ಹಾಸಿಗೆಗಳ ಆಸ್ಪತ್ರೆಯಾಗಿದ್ದರೂ, ಸರಿಯಾದ ಶೌಚಾಲಯ ವ್ಯವಸ್ಥೆಯೂ ಇಲ್ಲ. ಗಂಭೀರ ರೋಗಿಗಳು ಚಿಕಿತ್ಸೆಗಾಗಿ ಶಿಗ್ಗಾಂವಿ, ಹುಬ್ಬಳ್ಳಿ ಮತ್ತು ಹಾವೇರಿಗೆ ಅಲೆಯುವಂತಾಗಿದೆ.
ಇತ್ತೀಚೆಗೆ ಸ್ತ್ರೀರೋಗ ತಜ್ಞ, ಜನರಲ್ ಮೆಡಿಕಲ್ ತಜ್ಞರು ಇಲ್ಲದೇ ಇರುವ ಆಸ್ಪತ್ರೆಯಲ್ಲಿ ಅರವಳಿಕೆ (ಅನೆಸ್ತೇಶಿಯಾ) ವೈದ್ಯರ ಹುದ್ದೆಯನ್ನೂ ರದ್ದುಪಡಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. “ವೈದ್ಯರ ಹುದ್ದೆಗಳನ್ನು ಕಡಿತಗೊಳಿಸುವುದನ್ನು ನಾವು ಖಂಡಿಸುತ್ತೇವೆ” ಎಂದು ಸ್ಥಳೀಯ ನಿವಾಸಿ ನಿಜಾಮ್ ಸೊಲ್ಲಾಪುರ ಬೇಸರ ವ್ಯಕ್ತಪಡಿಸಿದ್ದಾರೆ.
ರೋಗಿಗಳಿಗೆ ಆರೋಗ್ಯಕರ ವಾತಾವರಣ ಒದಗಿಸಬೇಕಾದ ಆಸ್ಪತ್ರೆಯೇ ರೋಗಗ್ರಸ್ತವಾಗಿದ್ದು, ಈ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಸೋರುತ್ತಿರುವ ಕಟ್ಟಡದ ದುರಸ್ತಿ ಮತ್ತು ವೈದ್ಯರು ಹಾಗೂ ಸಿಬ್ಬಂದಿಯ ನೇಮಕಾತಿ ಮಾಡುವ ಮೂಲಕ, ಬಂಕಾಪುರ ಮತ್ತು ಸುತ್ತಮುತ್ತಲಿನ ಜನರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಇದು ಬರೀ ಕಟ್ಟಡದ ದುರಸ್ತಿಯ ಪ್ರಶ್ನೆಯಲ್ಲ, ಜನರ ಬದುಕಿನ ಪ್ರಶ್ನೆ.


Good 👍 job public samachar news
Support Sir.