
📰 ವಿದ್ಯಾರ್ಥಿ ಅರುಣ ಗುಡ್ಡದಕೇರಿಗೆ ರಾಜ್ಯಮಟ್ಟದ ಬಾಡಿ ಬಿಲ್ಡಿಂಗ್ನಲ್ಲಿ ಚಿನ್ನದ ಪದಕ
ಧಾರವಾಡ: ಜಿಲ್ಲೆಯ ಹುಬ್ಬಳ್ಳಿ ನಗರದ ವಿದ್ಯಾರ್ಥಿಯೊಬ್ಬರು ರಾಜ್ಯಮಟ್ಟದ ಫಿಜಿಕ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಹುಬ್ಬಳ್ಳಿ ನಗರದ ಕುಮಾರ್ ಅರುಣ ಗಂಗಾಧರ ಗುಡ್ಡದಕೇರಿ ಇವರು ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ (ಬಾಡಿ ಬಿಲ್ಡರ್) ಸ್ಪರ್ಧೆಯಲ್ಲಿ ರಾಜ್ಯಕ್ಕೆ ಚಿನ್ನದ ಪದಕ ಹಾಗೂ ಎಮ್.ಆರ್.ವಿ.ಟಿ.ಯು. ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಅರುಣ ಅವರು ವಿಜಯನಗರದ ವೀರಶೈವ ವಿದ್ಯಾವರ್ಧಕ ಸಂಘದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ (PDIT) ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಈ ಸಾಧನೆಯ ಮೂಲಕ ಅವರು ತಮ್ಮ ಮಹಾವಿದ್ಯಾಲಯದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಅರುಣ ಗುಡ್ಡದಕೇರಿ ಅವರು ಕುಮಾರ್ ನವೀನ್ ಗುರುಗಳ ಸಲಹೆ ಹಾಗೂ ರಾಷ್ಟ್ರಮಟ್ಟದ ಬಾಡಿ ಬಿಲ್ಡರ್ ಮಾರ್ಗದರ್ಶನದಲ್ಲಿ ಇನ್ಫಿನಿಟಿ ಕೋರ್ ಫಿಟ್ನೆಸ್ ಎಂಬ ಜಿಮ್ನಲ್ಲಿ ತರಬೇತಿ ಪಡೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಈ ಯುವಕನ ಸಾಧನೆ ಕುಟುಂಬಕ್ಕೆ ಮತ್ತು ಜನತೆಗೆ ಸಂತೋಷ ತಂದಿದೆ.
ಅರುಣ ಗುಡ್ಡದಕೇರಿ ಅವರು ತಮ್ಮ ಮುಂದಿನ ಗುರಿಯಾಗಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ಮತ್ತು ತರಬೇತಿಯನ್ನು ಮುಂದುವರೆಸಿದ್ದಾರೆ.

