

ಕುಂದಗೋಳ: ಶಿಕ್ಷಣವು ಪ್ರತಿಯೊಬ್ಬರ ಜೀವನದ ಭದ್ರ ಬುನಾದಿಯಾಗಿದೆ. ಗ್ರಾಮದ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ಕುಂದಗೋಳ ಕ್ಷೇತ್ರದ ಶಾಸಕ ಎಂ.ಆರ್. ಪಾಟೀಲ್ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ವಿಶೇಷ ಅನುದಾನದಡಿ ತಾಲ್ಲೂಕಿನ ರಾಮನಕೊಪ್ಪ ಗ್ರಾಮದಲ್ಲಿ 27.80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಮೂಲಸೌಕರ್ಯವು ಕಲಿಕಾ ವಾತಾವರಣವನ್ನು ಸುಧಾರಿಸುತ್ತದೆ. ಈ ಕೊಠಡಿಗಳು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಅವರು ತಿಳಿಸಿದರು.
ಈ ನೂತನ ಕೊಠಡಿಗಳು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ನೆರವಾಗಲಿವೆ ಎಂದು ಶಾಲೆಯ ಶಿಕ್ಷಕರು ಮತ್ತು ಪೋಷಕರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಭರಮಣ್ಣ ಮುಗಳಿ, ಶಿವಯ್ಯ ಹಿರೇಗೌಡರ್, ಮಾಲತೇಶ್ ಶ್ಯಾಗೋಟಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುಳಾ ಗೋನೇಪ್ಪನವರ್, ಎಸ್ಡಿಎಂಸಿ ಅಧ್ಯಕ್ಷರಾದ ಕೇದಾರಿ ಕಾಡಪ್ಪ ಜಟ್ಟಾರ್, ಶಿಕ್ಷಕರು, ಶಾಲಾ ಮಕ್ಕಳು ಹಾಗೂ ಗ್ರಾಮದ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

