
ಬೆಂಗಳೂರು:ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಕಾರಾಗೃಹದ ಒಳಗೂ ತನ್ನ ವಿಕೃತ ಮನಸ್ಥಿತಿ ಹಾಗೂ ಕಾಮದ ದಾಹವನ್ನು ತೀರಿಸಿಕೊಳ್ಳುತ್ತಿರುವುದು ಬಯಲಿಗೆ ಬಂದಿದ್ದು, ಸಮಾಜವೇ ತಲೆ ತಗ್ಗಿಸುವಂತಾಗಿದೆ. ಹೆಣ್ಣುಮಕ್ಕಳ ಜೀವ ಹಾಗೂ ಮಾನದೊಂದಿಗೆ ಚೆಲ್ಲಾಟವಾಡಿ, ಕಾನೂನಿನ ಕಟ್ಟುನಿಟ್ಟಿನ ಚಾಟಿ ಏಟಿಗೆ ಜೈಲು ಪಾಲಾಗಿದ್ದರೂ ಈತನಿಗೆ ಕನಿಷ್ಠ ಪಶ್ಚಾತ್ತಾಪವಾಗಲಿ ಅಥವಾ ಬುದ್ಧಿಯಾಗಲಿ ಬಂದಿಲ್ಲದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಾ, ಅಕ್ರಮವಾಗಿ ಮೊಬೈಲ್ ಬಳಸಿ ತನ್ನ ವಿಕೃತ ಆನಂದವನ್ನು ಮುಂದುವರಿಸಿದ್ದ ಪ್ರಜ್ವಲ್ ರೇವಣ್ಣನ ಅಸಲಿ ಮುಖವಾಡವನ್ನು ಪೊಲೀಸರು ಈಗ ಕಳಚಿಟ್ಟಿದ್ದಾರೆ.
ಲಕ್ಷ ಲಕ್ಷ ಹಣ ಚೆಲ್ಲಿ ಜೈಲಿಗೆ ಮೊಬೈಲ್ ತರಿಸಿಕೊಂಡ ಕಾಮಾಂಧ: ಸಿಮ್ಗಾಗಿ 50 ಸಾವಿರ!
ಜೈಲಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಿಂದಾಸ್ ಜೀವನ ನಡೆಸಲು ಸಂಚು ರೂಪಿಸಿದ್ದ ಪ್ರಜ್ವಲ್, ಮೊಬೈಲ್ ಸಾಧನಕ್ಕಾಗಿ ಬರೋಬ್ಬರಿ ಒಂದು ಲಕ್ಷ ರೂಪಾಯಿ ಹಾಗೂ ಸಿಮ್ ಕಾರ್ಡ್ಗಾಗಿ 50 ಸಾವಿರ ರೂಪಾಯಿ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಅಕ್ರಮ ಸಿಮ್ ಕಾರ್ಡ್ ಅನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ಖರೀದಿಸಲಾಗಿತ್ತು. ಹಣದ ಆಸೆಗೆ ಬಿದ್ದು ಈ ಕಾಮಪಿಶಾಚಿಗೆ ಜೈಲಿನೊಳಗೆ ಮೊಬೈಲ್ ತಲುಪಿಸಲು ಸಹಕರಿಸಿದ ಕಾರಾಗೃಹ ವಾರ್ಡನ್ ಪ್ರಕಾಶ್ ಗಾವ್ಡೇ ಹಾಗೂ ಡಿ.ಜೆ.ಹಳ್ಳಿ ಗಲಭೆಕೋರ ತೌಸಿಫ್ ಸೇರಿದಂತೆ ಒಟ್ಟು ಏಳು ಮಂದಿ ಅಕ್ರಮ ಜಾಲವನ್ನು ಪೊಲೀಸರು ಬಂಧಿಸಿ, ಅವರ ಬಂಡವಾಳವನ್ನು ರಟ್ಟು ಮಾಡಿದ್ದಾರೆ.
ಮೊಬೈಲ್ ಡೇಟಾ ಕಂಡು ಪೊಲೀಸರೇ ಶಾಕ್: ಜೈಲಲ್ಲೂ ಯುವತಿಯರಿಗೆ ಕರೆ!
ಪೊಲೀಸರು ಜೈಲಿನಲ್ಲಿ ದಾಳಿ ನಡೆಸಿ ಪ್ರಜ್ವಲ್ ಬಳಸುತ್ತಿದ್ದ ಮೊಬೈಲ್ ವಶಪಡಿಸಿಕೊಂಡು ಪರಿಶೀಲಿಸಿದಾಗ ಅದರಲ್ಲಿದ್ದ ಡೇಟಾ ಕಂಡು ತನಿಖಾಧಿಕಾರಿಗಳೇ ಕಂಗಾಲಾಗಿದ್ದಾರೆ. ಫೋನಿನಲ್ಲಿ ಬರೋಬ್ಬರಿ 173 ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಅದರಲ್ಲಿ ಮೂರು ವಿಡಿಯೋಗಳು ಸ್ವತಃ ಪ್ರಜ್ವಲ್ನದ್ದೇ ಎನ್ನಲಾಗಿದೆ. ಜೈಲಿನ ಕತ್ತಲ ಕೋಣೆಯಲ್ಲೂ ಕುಳಿತು ತನ್ನದೇ ವಿಕೃತ ವಿಡಿಯೋಗಳನ್ನು ನೋಡುತ್ತಾ ಆನಂದ ಪಡುತ್ತಿದ್ದ ಈತ, ಈ ಮೊಬೈಲ್ ಮೂಲಕ ಹಲವು ಯುವತಿಯರಿಗೂ ಕರೆ ಮಾಡಿರುವುದು ಪತ್ತೆಯಾಗಿದೆ. ಅಪರಾಧ ಎಸಗಿ ಶಿಕ್ಷೆಯಾಗಿದ್ದರೂ ಈತನ ಕಾಮದ ದಾಹ ಇನ್ನು ಶಮನವಾಗಿಲ್ಲವೇ ಎನ್ನುವುದು ನಾಗರಿಕ ಸಮಾಜವನ್ನು ಕೆರಳಿಸಿದೆ.

ತನ್ನ ವಿಕೃತಿಯಿಂದ ಪ್ರಾಮಾಣಿಕ ನೌಕರರ ಬದುಕಿಗೂ ಕೊಳ್ಳಿ ಇಟ್ಟ ಪಾಪಿ!
ತಾನು ಹೊಂಡಕ್ಕೆ ಬಿದ್ದಿದ್ದಲ್ಲದೆ, ತನ್ನ ಸುತ್ತಲಿನ ನೌಕರರ ಜೀವನವನ್ನೂ ಪ್ರಜ್ವಲ್ ಹಾಳುಗೆಡವಿದ್ದಾನೆ. ಹಣದ ಆಸೆಗೆ ಬಿದ್ದು ಈತನ ವಿಕೃತಿಯ ಆಟಕ್ಕೆ ಸಾಥ್ ನೀಡಿದ ಜೈಲು ಸಿಬ್ಬಂದಿ ಈಗ ಕೆಲಸ ಕಳೆದುಕೊಂಡು ಜೈಲು ಪಾಲಾಗುವಂತಾಗಿದೆ. ಇಂತಹ ಕಾಮಾಂಧ ಮತ್ತು ನೀಚ ಮನಸ್ಥಿತಿಯ ವ್ಯಕ್ತಿಗೆ ಜೈಲಿನಲ್ಲಿಯೂ ಕಟ್ಟುನಿಟ್ಟಿನ ಶಿಕ್ಷೆ ನೀಡಬೇಕು ಹಾಗೂ ಯಾವುದೇ ಕಾರಣಕ್ಕೂ ಇಂತಹ ಅಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

