
ಬೆಂಗಳೂರು/ರಾಮನಗರ, ಮೇ 24: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ ಭದ್ರತೆಯಲ್ಲಿ ಗಂಭೀರ ಲೋಪ ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಸೇರಿ ಒಟ್ಟು ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಅಧೀಕ್ಷಕ (SP) ಶ್ರೀನಿವಾಸ್ ಗೌಡ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡವರಲ್ಲಿ ಒಬ್ಬ PSI, ಒಬ್ಬ ASI ಹಾಗೂ ನಾಲ್ವರು ಪೊಲೀಸ್ ಪೇದೆಗಳು ಸೇರಿದ್ದಾರೆ. ವಿವಿಐಪಿ ಭದ್ರತೆಯಂತಹ ಅತ್ಯಂತ ಸೂಕ್ಷ್ಮ ಕರ್ತವ್ಯದ ಸಂದರ್ಭದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ ಆರೋಪದ ಮೇರೆಗೆ ಈ ಕ್ರಮ ಜರುಗಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಮೇ 10ರಂದು ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಬಳಿ ಪ್ರಧಾನಿ ಮೋದಿ ಸಂಚರಿಸಬೇಕಿದ್ದ ಮಾರ್ಗದ ಸಮೀಪ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಭಾರೀ ಬಂದೋಬಸ್ತ್ ನಿಯೋಜಿಸಲಾಗಿತ್ತು. ಅಮಾನತುಗೊಂಡಿರುವ ಆರು ಮಂದಿ ಸಿಬ್ಬಂದಿಯನ್ನು ಕೂಡ ಅದೇ ಪ್ರದೇಶದ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎನ್ನಲಾಗಿದೆ.
ವಿವಿಐಪಿ ಭೇಟಿ ಸಂದರ್ಭದಲ್ಲಿ ಮಾರ್ಗದ ಸಂಪೂರ್ಣ ತಪಾಸಣೆ ನಡೆಸಿ ಕಟ್ಟುನಿಟ್ಟಿನ ನಿಗಾವಹಿಸುವುದು ಭದ್ರತಾ ಸಿಬ್ಬಂದಿಯ ಪ್ರಮುಖ ಕರ್ತವ್ಯವಾಗಿದೆ. ಆದರೆ ಸ್ಫೋಟಕಗಳು ಪತ್ತೆಯಾದ ಸ್ಥಳದ ಸಮೀಪದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಿಬ್ಬಂದಿ ಅಗತ್ಯ ಎಚ್ಚರಿಕೆ ವಹಿಸಿಲ್ಲ ಹಾಗೂ ಸೂಕ್ತ ಅಲರ್ಟ್ನಲ್ಲಿರಲಿಲ್ಲ ಎಂಬುದು ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿಯವರ ಭದ್ರತೆಗೆ ಧಕ್ಕೆ ತರುವ ಮಟ್ಟದ ಗಂಭೀರ ಲೋಪವಾಗಿದೆ ಎಂದು ಪರಿಗಣಿಸಿರುವ ಎಸ್ಪಿ ಶ್ರೀನಿವಾಸ್ ಗೌಡ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ಆರು ಮಂದಿ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ದಿನದಿಂದಲೇ ಪೊಲೀಸ್ ಇಲಾಖೆಯಲ್ಲಿ ಆಂತರಿಕ ತನಿಖೆ ಚುರುಕುಗೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಇಲಾಖೆಯ ಇತರೆ ಸಿಬ್ಬಂದಿಗೂ ಇದು ಕಟ್ಟುನಿಟ್ಟಿನ ಎಚ್ಚರಿಕೆಯ ಸಂದೇಶವಾಗಿದೆ ಎಂದು ಹೇಳಲಾಗುತ್ತಿದೆ.

