
ಧಾರವಾಡ: ಮೈಸೂರಿನಲ್ಲಿ ಗುರುವಾರದಂದು ನಡೆದ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಯುವ ಸಂಭ್ರಮ-2025 ಕಾರ್ಯಕ್ರಮದಲ್ಲಿ, ಧಾರವಾಡ ಜಿಲ್ಲಾ ಗ್ರಾಮೀಣ ಭಾಗದ ಮಕ್ಕಳ ಸಾಂಸ್ಕೃತಿಕ ಕಲಾ ತಂಡವು ಭಾಗವಹಿಸಿ ಗಮನ ಸೆಳೆದಿದೆ. ಸಂಶಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಈ ತಂಡ, ತಮ್ಮ ಅದ್ಭುತ ಮಲ್ಲಗಂಬ ಪ್ರದರ್ಶನದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರದರ್ಶಿಸಿದ ಕೌಶಲ್ಯಪೂರ್ಣ ಮಲ್ಲಗಂಬ ಪ್ರದರ್ಶನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಶಿಕ್ಷಕರಾದ ಮಾರುತಿ ಮರೆಪ್ಪನವರ ಹಾಗೂ ಶಿವು ಹಿರೇಮಠ ತರಬೇತಿ ನೀಡಿದ್ದರು.
ಈ ಯಶಸ್ಸಿನ ಕುರಿತು ಮಾತನಾಡಿದ ಮಕ್ಕಳ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷರಾದ ರಾಜು ಪುಟ್ಟಣ್ಣನವರ, “ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಹಕಾರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಲಾಡ ಅವರಿಗೆ ನಮ್ಮ ತಂಡದ ಪರವಾಗಿ ಅಭಿನಂದನೆಗಳು. ಗ್ರಾಮೀಣ ಪ್ರದೇಶದ ಮಕ್ಕಳು ಇಂತಹ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಪ್ರೋತ್ಸಾಹ ನೀಡುವುದು ಅವಶ್ಯಕ. ಮಲ್ಲಗಂಬ ಮಾತ್ರವಲ್ಲದೆ, ಕಬಡ್ಡಿ, ಖೋಖೋ, ವಾಲಿಬಾಲ್ ಸೇರಿದಂತೆ ಎಲ್ಲ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಲು ಸಾಧ್ಯ” ಎಂದು ಹೇಳಿದರು.
ಈ ಪ್ರದರ್ಶನವು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಂಡದ ಸದಸ್ಯರನ್ನು ಎಲ್ಲರೂ ಅಭಿನಂದಿಸಿದರು.


Nice