
ಕುಂದಗೋಳ: ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಧ್ಯೇಯದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರೆಯುವ ನಿಟ್ಟಿನಲ್ಲಿ ಶ್ರಮಿಸಿದ ಜಗದ್ಗುರು ರೇಣುಕಾಚಾರ್ಯರ ಕೊಡುಗೆ ಅಪಾರ ಎಂದು ಸ್ಥಳೀಯ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಮುತ್ತಣ್ಣ ಜಡಿಮಠ ಹೇಳಿದರು.
ತಾಲೂಕಿನ ಸಂಶಿ ಗ್ರಾಮದ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಅಭಿವೃದ್ಧಿಗಾಗಿ ಮಠಗಳನ್ನು ಸ್ಥಾಪಿಸುವ ಮೂಲಕ ಧರ್ಮ, ಶಾಂತಿ, ಸಹಬಾಳ್ವೆ ಹಾಗೂ ಸಮಸಮಾಜದ ಬಗ್ಗೆ ಜಾಗೃತಿ ಮೂಡಿಸಿದ ಕೀರ್ತಿ ರೇಣುಕಾಚಾರ್ಯರದ್ದು. ಅವರ ಹಾಕಿಕೊಟ್ಟಿರುವ ಮಾರ್ಗದಲ್ಲಿ ಎಲ್ಲರೂ ಸಾಗಿ ಮಾದರಿ ಬದುಕು ಕಟ್ಟಿಕೊಳ್ಳೊಣ. ಸಮಾಜ ಏಳಿಗೆಗೆ ಶ್ರಮಿಸುತ್ತಿರುವ ಜಂಗಮ ಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ರೊಪಿಸಬೇಕು ಎಂದು ಆಗ್ರಹಿಸಿದರು.
ಸಮುದಾಯದ ಮುಖಂಡ ಶಿವಯ್ಯ ತಾಳಿಕೋಟಿಮಠ ಮಾತನಾಡಿ, ಲೋಕಕಲ್ಯಾಣಕ್ಕಾಗಿ ತಪಸ್ಸು ಆಚರಿಸಿ, ಸೇವೆಗೈದ ರೇಣುಕಾಚಾರ್ಯರ ಧ್ಯೇಯ ಇಂದಿನ ಯುವಸಮೂಹಕ್ಕೆ ಮಾದರಿಯಾಗಿವೆ. ಜಯಂತಿ ಆಚರಣೆ ಜತೆಗೆ ನಿತ್ಯ ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಂಗಮ ಸಮುದಾಯದ ಮುಖಂಡರಾದ ಶಂಕ್ರಯ್ಯ ಹಿರೇಮಠ, ಅನ್ನದಾನೇಶ್ವರ ಕುಂದಗೋಳಮಠ, ಚಂದ್ರಶೇಖರ ಚಿಕ್ಕಮಠ, ಜಯದೇವ ಹಿರೇಮಠ, ಶಿದ್ಲಿಂಗಯ್ಯ ಕೇರಿಮಠ, ಹಂಪಯ್ಯ ಹೊಸಮಠ, ಮೃತ್ಯುಂಜಯ ಗಡ್ಡದೇವರಮಠ, ಗುರುಶಾಂತಯ್ಯ
ಚಿಕ್ಕಮಠ, ಈರಣ್ಣ ಚಿಕ್ಕಮಠ, ಗಂಗಾಧರ ಹಿರೇಮಠ, ಸುನೀಲ ಚಿಕ್ಕಮಠ, ಅನ್ನಯ್ಯ ಕನವಳ್ಳಿಮಠ, ಗ್ರಾಪಂ ಸಿಬ್ಬಂದಿ ಮುತ್ತು ಸೊರಟಿ, ಜಗದೀಶ ದ್ಯಾವನೂರ ಹಾಗೂ ಇತರರಿದ್ದರು.

