
ಬೆಂಗಳೂರು: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಅವಮಾನ ಮಾಡಿದ ಆರೋಪದ ಮೇಲೆ, ಯೂಟ್ಯೂಬರ್ ಸಮೀರ್ ಎಂ.ಡಿ. ಯನ್ನು ಬಂಧಿಸಲು ಪೊಲೀಸರು ತೆರಳಿದಾಗ ಆತ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಸಮೀರ್ ವಿರುದ್ಧ ರಾಜ್ಯಾದ್ಯಂತ ಹಲವಾರು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ, ಪೊಲೀಸರು ಆತನ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಬನ್ನೇರುಘಟ್ಟ ಬಳಿಯ ಆತನ ನಿವಾಸದ ವಿಳಾಸ ಪತ್ತೆ ಹಚ್ಚಿದ್ದರು. ಇದರಂತೆ ಇಂದು ಬೆಳಿಗ್ಗೆ ಧರ್ಮಸ್ಥಳ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಬನ್ನೇರುಘಟ್ಟ ಠಾಣೆಯ ಪೊಲೀಸರ ಸಹಕಾರದೊಂದಿಗೆ ಸಮೀರ್ನನ್ನು ಬಂಧಿಸಲು ಜಿಗಣಿ ಹುಲ್ಲಳ್ಳಿಯ ಕ್ರೈಸ್ಟ್ ಕಾಲೇಜು ಪಕ್ಕದ ಆತನ ಮನೆಗೆ ತೆರಳಿದ್ದರು.
ಆದರೆ, ಪೊಲೀಸರು ಮನೆಗೆ ತಲುಪಿದಾಗ ಸಮೀರ್ ಅಲ್ಲಿ ಇರಲಿಲ್ಲ. ಆತನ ತಾಯಿ ಮತ್ತು ಸಹೋದರಿ ಮಾತ್ರ ಮನೆಯಲ್ಲಿದ್ದರು. ಪೊಲೀಸರು ಸಮೀರ್ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ಸಮೀರ್ ಎಂ.ಡಿ. ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

