
ವರದಿ: ವಿನಾಯಕ ಗುಡ್ಡದಕೇರಿ
ಬಡ ಕುಟುಂಬಗಳಿಗೆ ಉಚಿತ ವಿವಾಹ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶುಭ ಹಾರೈಕೆ
ಧಾರವಾಡ: ಜೈ ಭೀಮ ಯುವ ಶಕ್ತಿ ಸೇನಾ (ರಿ) ಸಂಘಟನೆಯ ವತಿಯಿಂದ ಹುಬ್ಬಳ್ಳಿ ನಗರದ ಕರ್ಕಿ ಬಸವೇಶ್ವರ ನಗರದ ಮುಖ್ಯದ್ವಾರದ ಎದುರುಗಡೆ ಸರ್ವಧರ್ಮದ ಬಡ ಕುಟುಂಬಗಳಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಹುಬ್ಬಳ್ಳಿಯ ಸಿದ್ದಾರೂಢ ಮಠದ ಪರಮಪೂಜ್ಯ ಬಸವಆನಂದ ಸ್ವಾಮಿಗಳು ಮತ್ತು ರುದ್ರಾಕ್ಷಿ ಮಠದ ಪರಮಪೂಜ್ಯ ಬಸವಲಿಂಗ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಈ ಪುಣ್ಯ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಹೊಸದಾಗಿ ವಿವಾಹವಾದ ವಧು-ವರರಿಗೆ ನೂರಾರು ಕಾಲ ಸುಖವಾಗಿ ಬಾಳಲಿ ಎಂದು ಶುಭ ಹಾರೈಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷರಾದ ಹರೀಶ ಗುಂಟ್ರಾಳ, ಉಪಾಧ್ಯಕ್ಷ ವಿಜಯ್ ಮಾದರ, ಪ್ರಧಾನ ಕಾರ್ಯದರ್ಶಿ ರಮೇಶ್ ಹಿರೇಮನಿ ಹಾಗೂ ಸಂಘಟನೆಯ ಎಲ್ಲ ಸದಸ್ಯರ ನೇತೃತ್ವದಲ್ಲಿ ಉಚಿತ ಸಾಮೂಹಿಕ ಮದುವೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆಯ ಸಂಸ್ಥಾಪಕರಾದ ಎಸ್ ಎಸ್ ಪಾಟೀಲ್, ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ವೆಂಕಟೇಶ್ ಅಶೋಕ್ ಕಾಟವೇ, ಕೆ ಜಿ ಪಿ ಪೌಂಡೇಶನ್ ಮಾಲೀಕರಾದ ಗಂಧ ಶೇಟ್, ಕನ್ನಡ ಚಲನಚಿತ್ರ ನಿರ್ದೇಶಕರಾದ ವಿನೋದ್ ಕುಮಾರ್ ಶೆಟ್ಟಿ, ಶಶಿಧರ್ ಬೀಜವಾಡ, ನದಾಫ್ ಪಿಂಜಾರ ಸಂಘದ ಉಪಾಧ್ಯಕ್ಷರಾದ ದಿವಾನ್ ನದಾಫ್, ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ವಿಜಯ್ ಗುಂಟ್ರಾಳ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಉಚಿತ ಮದುವೆ ಸಮಾವೇಶದ ಯಶಸ್ಸಿಗೆ ಸಹಕರಿಸಿದರು.

