

ಕುಂದಗೋಳ :ಸಂಶಿ: ಬೆಂಗಳೂರಿನ ಕೆಡಿಪಿ ಫೌಂಡೇಶನ್ ವಿದೇಶದಲ್ಲಿ ವ್ಯಾಸಂಗ ಮಾಡಿದರೂ ನಮ್ಮ ದೇಶದ ಶಾಲೆಗಳಿಗೆ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದು ಸಂಶಿ ಗ್ರಾಮದ ಕನ್ನಡ ಗಂಡುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಜು ಪುಟ್ಟಣ್ಣವರ ಅವರು ಹೇಳಿದರು.
ಗ್ರಾಮದ ಕನ್ನಡ ಗಂಡುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೆಜಿಎಸ್ ನಂ.1 ಶಾಲೆಯಲ್ಲಿ ಕೆಡಿಪಿ ಫೌಂಡೇಶನ್ ಬೆಂಗಳೂರು ಮತ್ತು ಪರೋಪಕಾರಿ.ಕಾಂ ಸಹಯೋಗದಲ್ಲಿ ಆಯೋಜಿಸಲಾದ ನೋಟ್ಬುಕ್ ಮತ್ತು ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ. ಕೆಡಿಪಿ ಫೌಂಡೇಶನ್ ಅಧ್ಯಕ್ಷರಾದ ಕಿರಣ್ ಕೆಮ್ಮಣ್ಣು ಮತ್ತು ಅನಿತಾ ರಾವ್ ದಂಪತಿಗಳು ತಮ್ಮ ಸಂಸ್ಥೆಯ ಮೂಲಕ ಈ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಬಾಗಲಕೋಟೆಯ ಸರ್ಕಾರಿ ಶಾಲೆಯಲ್ಲಿ ಕಲಿತ ಕಿರಣ್ ಕೆಮ್ಮಣ್ಣು, ವಿದೇಶದಲ್ಲಿ ಶಿಕ್ಷಣ ಪಡೆದಿದ್ದರೂ ತಮ್ಮಂತೆ ದೇಶದ ಎಲ್ಲ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಬೇಕು ಎಂಬ ಉದ್ದೇಶದಿಂದ ದೇಶದ ಹಲವು ರಾಜ್ಯಗಳಿಗೆ ಈ ಸೇವೆಯನ್ನು ವಿಸ್ತರಿಸಿದ್ದಾರೆ ಎಂದು ರಾಜು ಪುಟ್ಟಣ್ಣವರ ಹೇಳಿದರು.
ಈ ಸೇವಾ ಕಾರ್ಯದಲ್ಲಿ ಕಿರಣ್ ಅವರ ಕುಟುಂಬ ಸದಸ್ಯರು ಮತ್ತು ಷಾ ಪರಿವಾರ ಸಹಕರಿಸುತ್ತಿದ್ದಾರೆ. ಈ ಸೇವಾ ಕಾರ್ಯಕ್ಕೆ ದೇವರಿಂದ ಅವರಿಗೆ ಇನ್ನಷ್ಟು ಶಕ್ತಿ ದಕ್ಕಲಿ ಎಂದು ಅವರು ಹಾರೈಸಿದರು.
ಕೆಡಿಪಿ ಫೌಂಡೇಶನ್ ಪರವಾಗಿ ಆಗಮಿಸಿದ್ದ ವೆಂಕಟೇಶಗೌಡ ಮತ್ತು ಸಂಗೀತಗೌಡ ಅವರು, ಸಂಸ್ಥೆಯ ಕಾರ್ಯಕ್ಷೇತ್ರಗಳು ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಈ ಸೇವೆಯನ್ನು ಗ್ರಾಮಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಾಮ ಪಂಚಾಯಿತಿ ಸದಸ್ಯೆ ಶಬೀನಾಬಾನು ನದಾಫ್ ಮತ್ತು ಅವರ ಸಹೋದರಿ ಚಾಂದಬಿ ನದಾಫ್ ಅವರಿಗೆ ಪುಟ್ಟಣ್ಣವರ ಅವರು ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಮುದ್ದು ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ಗೌಡ್ರು ಪಾಟೀಲ್, ಉಪಾಧ್ಯಕ್ಷೆ ಲೀಲಾವತಿ ಪರಶುರಾಮ್ ಸೂಲದ, ಗೌರವ ಸದಸ್ಯರಾದ ಶಬೀನಾಬಾನು ನದಾಫ್ ಮತ್ತು ಹರೀಶ್ ಲಕ್ಷ್ಮೇಶ್ವರ ಸೇರಿದಂತೆ ಎಲ್ಲ ಎಸ್ಡಿಎಂಸಿ ಸದಸ್ಯರು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

