

ಕುಂದಗೋಳ: ತಾಲೂಕಿನ ಗುರುವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರಗಳ ಮೂಲಕ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾತ ಕಾದ್ರೋಳ್ಳಿ ಬಣ ತೀವ್ರ ಆಗ್ರಹ ವ್ಯಕ್ತಪಡಿಸಿದೆ.
ಜಿಲ್ಲಾಧ್ಯಕ್ಷ ಬಸವರಾಜ ಲಗಮ್ಮನವರ,ಹಾಗೂ ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೋಟೆಪ್ಪ ತಳಗೇರಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ, ನಂತರ ಉಪ ತಹಶೀಲ್ದಾರ ರೇಣುಕಾ ದಾನಣ್ಣವರ ಅವರಿಗೆ ಮನವಿ ಸಲ್ಲಿಸಿದರು.
ಸುಳ್ಳು ಪ್ರಮಾಣಪತ್ರದ ದುರುಪಯೋಗ
ಸಮಿತಿಯ ಮನವಿಯಲ್ಲಿ, ಸುಮಾರು 20ರಿಂದ 40 ಜನರು ‘ಭೋವಿ’ (ಎಸ್.ಸಿ) ಎಂದು ನಕಲಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ವಾಸ್ತವದಲ್ಲಿ ಅವರು ಪ್ರವರ್ಗ-1ಕ್ಕೆ ಸೇರಿದ ‘ರಾಜ ಭೋಯಿ’ ಅಥವಾ ‘ಭೋಯರ್’ ಸಮುದಾಯದವರಾಗಿದ್ದರೂ, ಕೋರ್ಟ್ ಅಫಿಡವಿಟ್ ಮೂಲಕ ಶಾಲಾ ದಾಖಲೆಗಳಿಲ್ಲವೆಂದು ಹೇಳಿ ಎಸ್.ಸಿ ಪ್ರಮಾಣಪತ್ರ ಪಡೆದಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಇವರೇ ಚಂದ್ರಪ್ಪ ಯಲ್ಲಪ್ಪ ಪಡೇಸೂರ ಅವರ ಶಾಲಾ ದಾಖಲಾತಿಯಲ್ಲಿ ‘ಹಿಂದೂ ಭೋಯರ್’ ಎಂದು ನಮೂದಿಸಿದ್ದರೂ, ಅವರು 2012-13ರಲ್ಲಿ ‘ಭೋವಿ (ಎಸ್.ಸಿ)’ ಎಂದು ಪ್ರಮಾಣಪತ್ರ ಪಡೆದಿದ್ದಾರೆ. ಇದೇ ಕುಟುಂಬದ ಗುರುನಾಥ ಫಕ್ಕೀರಪ್ಪ ಪಡೇಸೂರ ಅವರಿಗೂ 1995-96ರಲ್ಲಿ ಸರ್ಕಾರಿ ನೌಕರಿ ವೇಳೆ ಪಡೆದ ಎಸ್.ಸಿ ಪ್ರಮಾಣಪತ್ರವನ್ನು ಅಧಿಕಾರಿಗಳು ರದ್ದುಪಡಿಸಿದ್ದರು ಎಂಬುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ರೀತಿಯಾಗಿ ಬೇರೆ ಜಿಲ್ಲೆ ಹಾಗೂ ತಾಲೂಕುಗಳಿಂದ ಬಂದು ಗುರುವಿನಹಳ್ಳಿ ನಿವಾಸಿಗಳೆಂದು ಸುಳ್ಳು ದಾಖಲೆ ಸೃಷ್ಟಿಸಿ ಪ್ರಮಾಣಪತ್ರ ಪಡೆದವರೂ ಇದ್ದಾರೆ ಎಂದು ಸಂಘಟನೆ ದೂರಿದೆ.
15 ದಿನಗಳಲ್ಲಿ ವರದಿ
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ ರೇಣುಕಾ ದಾನಣ್ಣವರ ಮಾತನಾಡಿ – “ನಿಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ. 15 ದಿನಗಳೊಳಗಾಗಿ ಸೂಕ್ತ ಫಲಿತಾಂಶ ದೊರೆಯಲಿದೆ” ಎಂದು ಭರವಸೆ ನೀಡಿದರು.
ಈ ಮನವಿ ಸಂದರ್ಭದಲ್ಲಿ, ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ್ ಲಗಮ್ಮನವರ, ಜಿಲ್ಲಾ ಕೋಶಾಧ್ಯಕ್ಷ ಮಂಜುನಾಥ ತಳಗೇರಿ, ಕಲಘಟಗಿ ತಾಲ್ಲೂಕು ಅಧ್ಯಕ್ಷ ಶರೀಪ ಹರಿಜನ, ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷ ಯಲ್ಲಪ್ಪ ಹರಿಜನ, ಧಾರವಾಡ ತಾಲ್ಲೂಕು ಅಧ್ಯಕ್ಷ ಮಾದೇವಪ್ಪ ಹರಿಜನ, ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪೋಟೊ:
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾತ ಕಾದ್ರೋಳ್ಳಿ ಬಣ ತೀವ್ರ ಕೋಟ್ಟಿ ದಾಳಲೆ ಸೃಷ್ಟಿಸಿದವರ ವಿರುದ್ದ ತನಿಖೆ ನಡೆದಿ ಕ್ರಮಕೈಗೋಳ್ಳಬೆಕೆಂದು ಉಪ ತಹಶಿಲ್ದಾರ ರೇಣುಕಾ ದಾನಣ್ಣನವರಿಗೆ ಮನವಿ ಸಲ್ಲಿಸಿದರು.

