
ಕುಂದಗೋಳ: ಕೇವಲ ಪಠ್ಯ ಪುಸ್ತಕಗಳ ಅಧ್ಯಯನಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳು ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಎಂ.ಎಸ್. ಅಕ್ಕಿ ಹೇಳಿದರು.
ತಾಲ್ಲೂಕಿನ ಗುರುವಿನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಮತ್ತು ಇಡೀ ಸಮಾಜದ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಅವರು ಒತ್ತಿ ಹೇಳಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳು ಮತ್ತು ಸರಿಯಾದ ಪ್ರೋತ್ಸಾಹ ದೊರೆತರೆ, ಅವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಬಲ್ಲರು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಮಾಜಿ ಶಾಸಕ ಎಂ.ಎಸ್. ಅಕ್ಕಿ ಅವರು ಕ್ರೀಡಾ ಸಮವಸ್ತ್ರಗಳನ್ನು ವಿತರಿಸಿ, ಮುಂದಿನ ಹಂತದ ಸ್ಪರ್ಧೆಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಾನಂದ ನವಲಗುಂದ, ಹುಸೇನ್ ಹುಬ್ಬಳ್ಳಿ, ಅಡವಯ್ಯ ಪ. ಕುಬಿಹಾಳಮಠ, ಸಹದೇವಪ್ಪ ಪಡಪ್ಪಳಿ, ಶಿವಾನಂದ ದಪ್ಪಳಿ, ಶೇಖಪ್ಪ ಅಮರಾವತಿ, ಕುಮಾರ್ ಕೊಪ್ಪದ, ರಾಜು ಬೆಳವಲಕೊಪ್ಪ, ರಾಜು ಸಂಶಿ, ಅಕ್ಬರಸಾಬ್ ಕುಬಿಹಾಳ, ನಾಗಪ್ಪ ಹುಲಿಕಟ್ಟಿ, ರುದ್ರಯ್ಯ ಹುಲಸೋಗಿಮಠ, ಮೊಮ್ಮದಸಾಬ್ ಹುಬ್ಬಳ್ಳಿ, ವೀರೇಶ ಹಿರೇಮಠ, ಸೋಮಯ್ಯ ಕಟ್ಟಿಗೆಹರಿಮಠ, ಖಾದರಸಾಬ್ ಸಂಶಿ, ಶಾಲೆಯ ಮುಖ್ಯೋಪಾಧ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

