
ಕುಂದಾಪುರ: “ಗಾಡ್ ಪ್ರಾಮಿಸ್” ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆ ಚಿತ್ರತಂಡವು ಕುಂದಾಪುರ ಸಮೀಪದ ಪ್ರಸಿದ್ಧ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಮೂಡು ಗಣಪತಿ ಪೂಜೆಯನ್ನು ನೆರವೇರಿಸಿತು.
ಚಿತ್ರಕ್ಕೆ ಕಥೆ, ನಿರ್ದೇಶನ ಹಾಗೂ ನಾಯಕನಾಗಿ ಸುಚನ್ ಶೆಟ್ಟಿ ಕಾರ್ಯನಿರ್ವಹಿಸಿದ್ದು, ಕುಟುಂಬ, ನಂಬಿಕೆ ಹಾಗೂ ಕರಾವಳಿ ಭಾಗದ ಸಂಸ್ಕೃತಿಯನ್ನು ಒಳಗೊಂಡ ಮನರಂಜನಾ ಕಥಾಹಂದರವನ್ನು ಚಿತ್ರ ಹೊಂದಿದೆ.
ಚಿತ್ರೀಕರಣ ಪೂರ್ಣಗೊಂಡ ಸಂತಸದ ಹಿನ್ನೆಲೆಯಲ್ಲಿ ನಡೆದ ಪೂಜೆಯಲ್ಲಿ ಸುಚನ್ ಶೆಟ್ಟಿ, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರು, ನಿರ್ಮಾಪಕ ಮಹೇಂದ್ರ ಶೆಟ್ಟಿ, ಸಂಕಲನಕಾರ ನವೀನ್ ಶೆಟ್ಟಿ, ಕರಣ್ ಕುಂದರ್, ಕೃಷ್ಣ ಗುರೂಜಿ, ಗುರುಪ್ರಸಾದ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿ ಭಾಗವಹಿಸಿದ್ದರು.
ಕುಂದಾಪುರ ಹಾಗೂ ಸುತ್ತಮುತ್ತಲಿನ ಸುಂದರ ಪ್ರದೇಶಗಳಲ್ಲಿ ನಡೆದ ಚಿತ್ರೀಕರಣ ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಪ್ರವೇಶಿಸಿದೆ. ಡಬ್ಬಿಂಗ್, ಸಂಗೀತ, ಸಂಕಲನ ಸೇರಿದಂತೆ ಇತರೆ ತಾಂತ್ರಿಕ ಕಾರ್ಯಗಳು ಭರದಿಂದ ಸಾಗುತ್ತಿವೆ.
ಚಿತ್ರದ ಫಸ್ಟ್ ಲುಕ್, ಟೀಸರ್ ಹಾಗೂ ಹಾಡುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಯೋಜನೆ ಇದ್ದು, “ಗಾಡ್ ಪ್ರಾಮಿಸ್” ಚಿತ್ರವು ಅಕ್ಟೋಬರ್ನಲ್ಲಿ ರಾಜ್ಯಾದ್ಯಂತ ಹಾಗೂ ವಿದೇಶಗಳಲ್ಲೂ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

