ಗಂಗಾವತಿ ರೈಸ್ ಮಿಲ್ ಮಾಲೀಕನ ವಿರುದ್ಧ ಎಫ್‌ಐಆರ್: ‘ಅನ್ನಭಾಗ್ಯ’ ಅಕ್ಕಿ ಕಾಳಸಂತೆಕೋರರ ಮೇಲೆ ಹಳೆ ಹುಬ್ಬಳ್ಳಿಯಲ್ಲಿ ದಾಳಿ

Spread the love

ಗಂಗಾವತಿ/ಹುಬ್ಬಳ್ಳಿ: ಸರ್ಕಾರದ ಜನಪರ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಭ್ರಷ್ಟಾಚಾರಿಗಳ ಮತ್ತು ಸಮಾಜಘಾತಕ ಶಕ್ತಿಗಳ ವಿರುದ್ಧ ಕ್ರಮ ಮುಂದುವರಿದಿದೆ. ಗಂಗಾವತಿಯಲ್ಲಿ ಬಡವರಿಗೆ ದೊರೆಯಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ವಿದೇಶಗಳಿಗೆ ಸಾಗಿಸುತ್ತಿರುವ ಆರೋಪದಲ್ಲಿ ಉಮಾಶಂಕರ್ ರೈಸ್ ಮಿಲ್ನ ಮಾಲೀಕನ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ. ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಕೆಲವು ಮಹಿಳೆಯರನ್ನು ಹಳೆ ಹುಬ್ಬಳ್ಳಿಯಲ್ಲಿ ಅಧಿಕಾರಿಗಳು ಹಿಡಿದು, ಬೃಹತ್ ಪ್ರಮಾಣದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಗಂಗಾವತಿ ಅಕ್ರಮ ಸಾಗಾಟದ ಮೇಲೆ ಕ್ರಮದ ಎಚ್ಚರಿಕೆ
ಉಮಾಶಂಕರ್ ರೈಸ್ ಮಿಲ್‌ನ ಮಾಲೀಕ ಸರಿಯಾದ ಲೆಕ್ಕಪತ್ರ ನೀಡದೆ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ರೈಸ್ ಮಿಲ್‌ನಿಂದ ಅಕ್ಕಿಯನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಮಾಲೀಕ ಉಮೇಶ್ ಸಿಂಗನಾಳ ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸದೇ, “ಉಮಾಶಂಕರ್ ರೈಸ್ ಮಿಲ್ ಮಾಲೀಕ” ಎಂದು ನಮೂದಿಸಲಾಗಿದೆ. ಜೊತೆಗೆ, ಗೋದಾಮು ಮ್ಯಾನೇಜರ್ ಸೋಮಶೇಖರ್, ಲಾರಿ ಚಾಲಕ ಮತ್ತು ಕ್ಲೀನರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು, “ಈ ಭ್ರಷ್ಟಾಚಾರದ ಹಿಂದಿರುವ ಅಧಿಕಾರಿಗಳೂ ಭಾಗಿಯಾಗಿದ್ದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಯೋಜನೆಗಳನ್ನು ಭ್ರಷ್ಟರಿಗೆ ಮಾರಾಟ ಮಾಡಿ, ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.

ಹಳೆ ಹುಬ್ಬಳ್ಳಿಯಲ್ಲಿ ‘ಅನ್ನಭಾಗ್ಯ’ ಅಕ್ಕಿ ಕಾಳಸಂತೆಕೋರರು ಸಿಕ್ಕಿಬಿದ್ದರು;
ಸರ್ಕಾರ ಬಡವರಿಗೆ ಅನ್ನ ಒದಗಿಸುವ ‘ಅನ್ನಭಾಗ್ಯ’ ಯೋಜನೆಯ ಅಕ್ಕಿ ಕೂಡಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ. ಹಳೆ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಕೆಲವು ಮಹಿಳೆಯರು ಯೋಜನೆಯ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಈ ದಾಳಿಯಲ್ಲಿ 500 ಕ್ವಿಂಟಾಲ್ ಅಕ್ರಮ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಸಮಯದಲ್ಲಿ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದಕ್ಕಿಳಿದ ಮಹಿಳೆಯರು, ತಮ್ಮ ಕೃತ್ಯವನ್ನು ಸಮರ್ಥಿಸಲು ಯತ್ನಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಆಹಾರ ಇಲಾಖೆಯ ಅಧಿಕಾರಿಯಾದ ವಸುಂಧರಾ ಅವರು, “ಸರ್ಕಾರದ ಉಚಿತ ಅಕ್ಕಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ರೀತಿ ಮಾರಾಟ ಮಾಡಲು ಯತ್ನಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಸಂಪತ್ತನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ಸಮಾಜ ವಿರೋಧಿ ಕೃತ್ಯಗಳು ಕಠಿಣ ಶಿಕ್ಷೆಗೆ ಅರ್ಹವಾಗಿವೆ.

ಈ ಎರಡೂ ಘಟನೆಗಳು ಸರ್ಕಾರದ ಸೌಲಭ್ಯಗಳು ಹೇಗೆ ದುರುಪಯೋಗವಾಗುತ್ತಿವೆ ಎಂಬುದನ್ನು ತೋರಿಸುತ್ತಿವೆ. ಭ್ರಷ್ಟಾಚಾರ ಮತ್ತು ಕಾಳಸಂತೆಕೋರರ ವಿರುದ್ಧ ಸರ್ಕಾರ ಮತ್ತು ಅಧಿಕಾರಿಗಳು ಇನ್ನಷ್ಟು ಕಠಿಣವಾಗಿ ವರ್ತಿಸಬೇಕಾದ ಅನಿವಾರ್ಯತೆಯನ್ನು ಇದು ಸೂಚಿಸುತ್ತಿದೆ.

Leave a Reply

Your email address will not be published. Required fields are marked *