
ಧಾರವಾಡ: ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ‘ಭೂ ಸುರಕ್ಷಾ ಯೋಜನೆ’ಯಡಿ ಭೂ ದಾಖಲೆಗಳ ಸ್ಕ್ಯಾನಿಂಗ್ ಹಾಗೂ ಅಪ್ಲೋಡಿಂಗ್ ಪ್ರಗತಿಯಲ್ಲಿ ಉತ್ತಮ ಸಾಧನೆ ಮಾಡಿರುವ ಕುಂದಗೋಳ ತಹಶೀಲ್ದಾರ್ ರಾಜು ಮಾವರಕರ್ ಅವರಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ದಿವ್ಯ ಪ್ರಭು ಜಿ. ಆರ್.ಜೆ ಅವರು ಅಭಿನಂದನಾ ಪತ್ರವನ್ನು ಸಲ್ಲಿಸಿದ್ದಾರೆ.
ಆಗಷ್ಟ್ 28 ರಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಿಡುಗಡೆಯಾದ ಪತ್ರದಲ್ಲಿ ಈ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸಲಾಗಿದೆ. ಜನವರಿ 1, 2025ರಿಂದ ಆಗಸ್ಟ್ 27, 2025ರ ಅವಧಿಯಲ್ಲಿ ಕುಂದಗೋಳ ತಾಲೂಕು ರಾಜ್ಯ ಮಟ್ಟದಲ್ಲಿ 27ನೇ ಸ್ಥಾನ ಹಾಗೂ ಜಿಲ್ಲಾ ಮಟ್ಟದಲ್ಲಿ 2ನೇ ಸ್ಥಾನ ಪಡೆದುಕೊಂಡಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಈ ಅವಧಿಯಲ್ಲಿ ನಿಮ್ಮ ಅವಿರತ ಸೇವೆ ಮತ್ತು ಶ್ರಮವು ಶ್ಲಾಘನೀಯವಾಗಿದ್ದು, ಜಿಲ್ಲಾಡಳಿತ ನಿಮ್ಮನ್ನು ಅಭಿನಂದಿಸುತ್ತದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ಮತ್ತು ಕಾರ್ಯಕ್ಷಮತೆಯನ್ನು ನಿರೀಕ್ಷಿಸುತ್ತೇನೆ” ಎಂದು ಜಿಲ್ಲಾಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಾಧನೆಯು, ಕುಂದಗೋಳ ತಾಲೂಕು ಭೂ ಸುರಕ್ಷಾ ಯೋಜನೆಯ ಅನುಷ್ಠಾನದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ತಹಶೀಲ್ದಾರ ರಾಜು ಮಾವರಕರ್ ಅವರ ಪ್ರಯತ್ನಕ್ಕೆ ಜಿಲ್ಲಾಧಿಕಾರಿಗಳ ಈ ಮೆಚ್ಚುಗೆ ಮತ್ತಷ್ಟು ಪ್ರೇರಣೆ ನೀಡುವಂತಿದೆ.

