
ನವಲಗುಂದ: ತಾಲ್ಲೂಕಿನ ಗುಡಿಸಾಗರದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ (SVYM) ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಕ್ಕೀರೇಶ ಪಡೆಸೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿದ್ದು, ಇಂತಹ ಶಿಬಿರಗಳಲ್ಲಿ ಆಯೋಜಿಸುವ ಚಟುವಟಿಕೆಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು. ಎಸ್ವಿವೈಎಂ ಸಂಸ್ಥೆಯು ನಮ್ಮ ಶಾಲೆಗೆ ನೀಡುತ್ತಿರುವ ಕೊಡುಗೆ ಅಪಾರವಾಗಿದ್ದು, ದಸರಾ ಮತ್ತು ಬೇಸಿಗೆ ಶಿಬಿರಗಳ ಮೂಲಕ ಮಕ್ಕಳಲ್ಲಿ ಪಠ್ಯದ ಜೊತೆಗೆ ಧ್ಯಾನ ಹಾಗೂ ಕ್ರಿಯಾಶೀಲತೆಯನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಣ್ಣ ಗುಳೇದ ಭಾಗವಹಿಸಿದ್ದರು. ವೇದಿಕೆಯ ಮೇಲೆ ದೇವಪ್ಪ ಬಡಿಗೇರ, ಮಹೇಶ್ ಮರೆಲ್ಲರ್, ಬರಮಪ್ಪ ಅಂಕಲಿ, ಲಲಿತಾ ಕೆರಣ್ಣರ, ಯಶೋದಾ ಪಡೆಸೂರ, ಶಂಭುಗೌಡ ಕುಲಕರ್ಣಿ ಹಾಗೂ ಎಸ್ವಿವೈಎಂ ಸಿಬ್ಬಂದಿಗಳಾದ ಶ್ರೀಕಾಂತ ಹಂಜಿ, ವಿಕ್ರಮ ಚಾಕಲಬ್ಬಿ, ಸುದಾ ಹಿರೇಮಠ ಮತ್ತು ಸೃಷ್ಟಿ ದೇವರಡ್ಡಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 48 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಕುಮಾರಿ ತೇಜಸ್ವಿನಿ ಖನ್ನೂರ ಮತ್ತು ಶ್ರೇಯಾ ದೇವರಡ್ಡಿ ಪ್ರಾರ್ಥಿಸಿದರು. ಸೃಷ್ಟಿ ದೇವರಡ್ಡಿ ಕಾರ್ಯಕ್ರಮ ನಿರೂಪಿಸಿದರೆ, ಸುದಾ ಹಿರೇಮಠ ವಂದಿಸಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಈ ಶಿಬಿರವು ಉತ್ತಮ ವೇದಿಕೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

