
ಕೊಲಂಬೋ: ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಹಾಶಿವರಾತ್ರಿಯ ಪವಿತ್ರ ದಿನದಂದೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್ನ 27ನೇ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಆದರೆ, ಪಂದ್ಯದ ಆರಂಭಕ್ಕೂ ಮುನ್ನವೇ ಮೈದಾನದಲ್ಲಿ ರಾಜತಾಂತ್ರಿಕ ಬಿಸಿ ಕಾಣಿಸಿಕೊಂಡಿದ್ದು, ಉಭಯ ತಂಡಗಳ ನಾಯಕರು ಹಸ್ತಲಾಘವ ಮಾಡದೆ ‘ಹ್ಯಾಂಡ್ಶೇಕ್ ನಿರಾಕರಣೆ’ ವಿವಾದವನ್ನು ಮುಂದುವರಿಸಿದ್ದಾರೆ.
ಕಳೆದ ವರ್ಷ ನಡೆದ ಏಷ್ಯಾ ಕಪ್ ಟೂರ್ನಿಯ ವೇಳೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ನಾಯಕನೊಂದಿಗೆ ಕೈಕುಲುಕಲು ನಿರಾಕರಿಸಿದ್ದು ಜಾಗತಿಕ ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿತ್ತು. ಇಂದಿನ ಹೈವೋಲ್ಟೇಜ್ ಪಂದ್ಯದಲ್ಲೂ ಅದೇ ಪರಿಸ್ಥಿತಿ ಮರುಕಳಿಸಿದ್ದು, ಟಾಸ್ ಪ್ರಕ್ರಿಯೆಯ ನಂತರ ಇಬ್ಬರೂ ನಾಯಕರು ಪರಸ್ಪರ ಕೈಕುಲುಕದೆ ದೂರ ಸರಿದಿದ್ದಾರೆ. ಎರಡು ದೇಶಗಳ ನಡುವಿನ ಸುದೀರ್ಘ ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಇತ್ತೀಚಿನ ಕ್ರೀಡಾ ರಾಜಕೀಯದ ಕಹಿ ಘಟನೆಗಳು ಈ ಪಂದ್ಯದ ಕಣಕಣದಲ್ಲೂ ಪ್ರತಿಫಲಿಸುತ್ತಿವೆ. ಉಭಯ ನಾಯಕರ ಈ ನಡೆ ಕ್ರೀಡಾಂಗಣದಲ್ಲಿನ ಬಿಗುವಿನ ವಾತಾವರಣವನ್ನು ಮತ್ತಷ್ಟು ತಾರಕಕ್ಕೇರಿಸಿದ್ದು, ಕ್ರಿಕೆಟ್ ಅಭಿಮಾನಿಗಳ ನಡುವೆ ಭಾರೀ ಕುತೂಹಲ ಮೂಡಿಸಿದೆ.

