

ಮುದ್ದೇಬಿಹಾಳ: ತಾಲೂಕಿನ ಕುಂಚಗನೂರು ಗ್ರಾಮದ ಬಳಿ ಇರುವ ಕೃಷ್ಣಾ ನದಿಯಲ್ಲಿ ಮೊಸಳೆಯೊಂದು ಗ್ರಾಮಸ್ಥನೊಬ್ಬನನ್ನು ನೀರಿಗೆ ಸೆಳೆದೊಯ್ದಿರುವ ದಾರುಣ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಕಾಶಪ್ಪ ಹಣಮಂತ ಕಂಬಳಿ (38) ಎಂಬಾತನೇ ಮೊಸಳೆಗೆ ಬಲಿಯಾದ ದುರ್ದೈವಿ.
ಅಮವಾಸ್ಯೆ ಇದ್ದ ಕಾರಣ, ಕಾಶಪ್ಪ ತನ್ನ ಎರಡು ಎತ್ತುಗಳಿಗೆ ನದಿಯಲ್ಲಿ ಮೈ ತೊಳೆಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ದಿಢೀರ್ ದಾಳಿ ನಡೆಸಿದ ಮೊಸಳೆ, ಆತನನ್ನು ನೀರಿನೊಳಗೆ ಸೆಳೆದೊಯ್ದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ನದಿಯಲ್ಲಿ ದೋಣಿ ಮತ್ತು ತೆಪ್ಪಗಳ ಮೂಲಕ ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ.
ಕಾಶಪ್ಪ ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಘಟನೆ ನಡೆದ ಬಳಿಕ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ನದಿ ದಂಡೆಯಲ್ಲಿ ಜಮಾಯಿಸಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ.

