ಬಡ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟ: ಕೊಳಚೆ ನೀರಿನಲ್ಲೇ ತಟ್ಟೆ ತೊಳೆಯುವ ದಯನೀಯ ಸ್ಥಿತಿ!

Spread the love

ಜಮಖಂಡಿ: “ಮಕ್ಕಳನ್ನು ದೇವರ ಸಮಾನ” ಎಂದು ಕರೆಯುವ ನಾವು, ಅದೇ ಮಕ್ಕಳು ಅನುಭವಿಸುತ್ತಿರುವ ಈ ನರಕಸದೃಶ ಸ್ಥಿತಿಯನ್ನು ನೋಡಿ ಮೌನವಹಿಸಿರುವುದು ವ್ಯವಸ್ಥೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಂತಿದೆ. ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಕುಡಿಯುವ ನೀರಿಲ್ಲದೆ, ತಾವು ಊಟ ಮಾಡಿದ ತಟ್ಟೆಗಳನ್ನು ಕೊಳಚೆ ನೀರಿನಲ್ಲಿ ತೊಳೆಯುತ್ತಿರುವ ದೃಶ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

​ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎಷ್ಟಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮುಗಿಸಿದ ನಂತರ ತಟ್ಟೆ ತೊಳೆಯಲು ಕನಿಷ್ಠ ನೀರಿನ ವ್ಯವಸ್ಥೆಯೂ ಇಲ್ಲದ ಕಾರಣ, ಶಾಲೆಯ ಪಕ್ಕದಲ್ಲೇ ಹರಿಯುವ ಒಳಚರಂಡಿಯ ಅಶುದ್ಧ ನೀರನ್ನೇ ಆಶ್ರಯಿಸಿದ್ದಾರೆ. ಇದು ಕೇವಲ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವಲ್ಲ, ಬದಲಾಗಿ ಮಕ್ಕಳ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ.

ಜಾಗೃತವಾಗದ ಅಧಿಕಾರಿಗಳು:

“ಇಂದಿನ ಮಕ್ಕಳು ನಾಳಿನ ಪ್ರಜೆಗಳು” ಎಂಬ ಘೋಷಣೆಗಳು ಕೇವಲ ಗೋಡೆಗಳ ಮೇಲಿನ ಬರಹಕ್ಕೆ ಸೀಮಿತವಾಗಿವೆ. ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಇಂತಹ ಘಟನೆಗಳು ನಡೆಯುತ್ತಿದ್ದರೂ, ಸ್ಥಳೀಯ ಬಿಇಒ ಆಗಲಿ ಅಥವಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲಿ ಎಚ್ಚೆತ್ತುಕೊಳ್ಳದಿರುವುದು ದುರ್ದೈವದ ಸಂಗತಿ. ಅಶುದ್ಧ ನೀರಿನಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಪಾಲಕರು ಆತಂಕಕ್ಕೊಳಗಾಗಿದ್ದಾರೆ.

​ಇದು ಯಾವುದೇ ರಾಜಕೀಯ ವಿಷಯವಲ್ಲ, ಬದಲಾಗಿ ಮಾನವೀಯತೆ ಮತ್ತು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ. ಕೂಡಲೇ ಶಿಕ್ಷಣ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ಶಾಲೆಗೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ದಲಿತ ಸಂಘಟನೆಗಳು ಹಾಗೂ ಪೋಷಕರ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *