ಧಾರವಾಡ: ಕರ್ನಾಟಕ ಜಾನಪದ ಅಕಾಡೆಮಿಯು ಜಾನಪದ ಕ್ಷೇತ್ರದ ವಿವಿಧ ವಿಷಯಗಳ ಕುರಿತು ಕ್ಷೇತ್ರಕಾರ್ಯ ನಡೆಸಿ ಅಧ್ಯಯನ ಕೃತಿಗಳನ್ನು ಸಿದ್ಧಪಡಿಸಲು ಫೆಲೋಶಿಪ್ (ಅಧ್ಯಯನ ವೇತನ) ಲೇಖನಗಳಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಕಾಡೆಮಿಯ ಅಧಿಕೃತ ವೆಬ್ಸೈಟ್ನಲ್ಲಿ ನಿಗದಿಪಡಿಸಿರುವ ವಿವಿಧ ಶೀರ್ಷಿಕೆಗಳನ್ನು ಆಧರಿಸಿ ಅಧ್ಯಯನ ನಡೆಸಲು ಈ ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳು ಅಕಾಡೆಮಿ ಸೂಚಿಸಿರುವ ಶೀರ್ಷಿಕೆಗಳಲ್ಲಿ ತಮಗೆ ಆಸಕ್ತಿಯಿರುವ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು, ಅದರ ಬಗ್ಗೆ ಐದು ಪುಟಗಳ ಸಾರಲೇಖ (Synopsis) ಸಿದ್ಧಪಡಿಸಬೇಕು. ಭರ್ತಿ ಮಾಡಿದ ಅರ್ಜಿ ಹಾಗೂ ಸಾರಲೇಖವನ್ನು ಜನವರಿ 23, 2026 ರೊಳಗಾಗಿ ‘ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002’ ಈ ವಿಳಾಸಕ್ಕೆ ಕಳುಹಿಸಿಕೊಡಬೇಕೆಂದು ತಿಳಿಸಲಾಗಿದೆ. ಸಾರಲೇಖದ ಗುಣಮಟ್ಟದ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳನ್ನು ಮುಂದಿನ ಹಂತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಅಂತಿಮವಾಗಿ ಆಯ್ಕೆಯಾದವರಿಗೆ ಫೆಲೋಶಿಪ್ ಕಾರ್ಯ ನಿರ್ವಹಿಸಲು ಅಧಿಕೃತ ಆದೇಶ ನೀಡಲಾಗುತ್ತದೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 15 ಅಭ್ಯರ್ಥಿಗಳಿಗೆ ಈ ಫೆಲೋಶಿಪ್ ನೀಡಲಾಗುತ್ತಿದ್ದು, ಇದರಲ್ಲಿ ಸಾಮಾನ್ಯ ವರ್ಗಕ್ಕೆ 1, ಪರಿಶಿಷ್ಟ ಜಾತಿಗೆ 5 ಮತ್ತು ಪರಿಶಿಷ್ಟ ಪಂಗಡಕ್ಕೆ 9 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಅರ್ಜಿ ನಮೂನೆ, ಲಭ್ಯವಿರುವ ಶೀರ್ಷಿಕೆಗಳ ಪಟ್ಟಿ ಮತ್ತು ಹೆಚ್ಚಿನ ತಾಂತ್ರಿಕ ವಿವರಗಳಿಗಾಗಿ ಅಭ್ಯರ್ಥಿಗಳು ಅಕಾಡೆಮಿಯ ಅಧಿಕೃತ ವೆಬ್ಸೈಟ್ https://janapada.karnataka.gov.in ಗೆ ಭೇಟಿ ನೀಡಬಹುದು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

