
ಧಾರವಾಡ, ನ.14: ದೇಶದ ಮೊದಲ ಪ್ರಧಾನಿಯಾಗಿರುವ ಪಂಡಿತ ಜವಾಹರಲಾಲ ನೆಹರು ಅವರು ನವ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದ ದೀರ್ಘದೃಷ್ಟಿಯ ನಾಯಕರು. ಅವರ ಆದರ್ಶಗಳು ಸದಾಕಾಲ ನಮ್ಮೆಲ್ಲರಿಗೂ ಪ್ರೇರಣೆ. ಮಕ್ಕಳನ್ನು ಅಪಾರವಾಗಿ ಪ್ರೀತಿಸಿದ್ದ ನೆಹರು ಅವರು ತಮ್ಮ ಜನ್ಮದಿನವನ್ನು ದೇಶದ ಮಕ್ಕಳಿಗಾಗಿ ಸಮರ್ಪಿಸಿದರು. ಮಕ್ಕಳೇ ನಾಡಿನ ನಾಳಿನ ಭವಿಷ್ಯ, ಆಶಾಕಿರಣ. ಅವರ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಾ ಬದ್ಧವಾಗಿದೆ,” ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಶುಕ್ರವಾರದಂದು (ನ.14) ಕರ್ನಾಟಕ ಬಾಲವಿಕಾಸ ಅಕಾಡೆಮಿ ಕೇಂದ್ರ ಕಚೇರಿಯಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಕ್ಕಳ ಸಮ್ಮುಖದಲ್ಲಿ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ಅಕಾಡೆಮಿಯ ಸಭಾಭವನದಲ್ಲಿ ಮಕ್ಕಳಿಂದ ಮನರಂಜಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಭಿನ್ನ ವೇಷಭೂಷಣ ಮತ್ತು ವಿಶೇಷ ಉಡುಪುಗಳಲ್ಲಿ ಆಗಮಿಸಿದ್ದ ಮಕ್ಕಳು ಇಡೀ ಆವರಣಕ್ಕೆ ಬಣ್ಣ ತುಂಬಿದರು. ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಬೆಳಿಗ್ಗೆ 6:30ಕ್ಕೆ ಮಕ್ಕಳನ್ನು ಒಳಗೊಂಡ ಗುಂಪು ಧಾರವಾಡದ ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿ, ನಾಡಿಗೆ ಮಹತ್ವದ ಕೊಡುಗೆ ನೀಡಿದ ವಿದ್ವಾಂಸರ ಜನ್ಮತಾಳಿದ ಸ್ಥಳಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸಿತು.

