

ಐವಾನ್ ಡಿಸೋಜಾ ವಜಾಗೆ ಬಿಜೆಪಿ-ಜೆಡಿಎಸ್ ಸದಸ್ಯರಿಂದ ಒತ್ತಾಯ; ರಾಜ್ಯಪಾಲರ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ
ಬೆಂಗಳೂರು: ರಾಜ್ಯಪಾಲರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರನ್ನು ಪರಿಷತ್ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ದೇಶದ ಸಮಗ್ರತೆ ಮತ್ತು ಸಂವಿಧಾನದ ಗೌರವಕ್ಕೆ ಧಕ್ಕೆಯುಂಟು ಮಾಡುವ ಹೇಳಿಕೆ ಇದಾಗಿದ್ದು, ಇದರ ಪರಿಣಾಮವಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.
ಹೇಳಿಕೆಯ ಹಿಂದಿನ ಘಟನೆ
ದಿ: 19.09.2024 ರಂದು ಮಂಗಳೂರಿನ ಮಹಾನಗರ ಪಾಲಿಕೆ ಎದುರು ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಐವಾನ್ ಡಿಸೋಜಾ ಅವರು ಈ ಹೇಳಿಕೆ ನೀಡಿದ್ದರು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯಮಂತ್ರಿಗಳ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹಲೋಟ್ ಅವರು ಅನುಮತಿ ನೀಡಿದ್ದನ್ನು ಖಂಡಿಸುವ ವೇಳೆ, “ಬಾಂಗ್ಲಾ ಅಧ್ಯಕ್ಷರು ರಾತ್ರೋರಾತ್ರಿ ಓಡಿಹೋದಂತೆ ಇಲ್ಲಿಯೂ ರಾಜ್ಯಪಾಲರು ಓಡಿಹೋಗುವಂತೆ ಮಾಡುತ್ತೇವೆ” ಎಂದು ಡಿಸೋಜಾ ಹೇಳಿದ್ದರು.
ಗಂಭೀರ ಆರೋಪದ
ಈ ಹೇಳಿಕೆಯು ಸಾವಿರಾರು ಬೆಂಬಲಿಗರನ್ನು ಪ್ರಚೋದಿಸಿ ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶ, ಕಲ್ಲುತೂರಾಟ, ಬಸ್ಸುಗಳ ಹಾನಿ ಮತ್ತು ಗಲಭೆಗಳಿಗೆ ಕಾರಣವಾಯಿತು ಎಂದು ಮನವಿಯಲ್ಲಿ ದೂರಲಾಗಿದೆ.
ವಿಶೇಷವಾಗಿ, ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲರ ವಿರುದ್ಧ ಇಂತಹ ನಿಂದನಾತ್ಮಕ ಮತ್ತು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇಂತಹ ಹೇಳಿಕೆಗಳು ರಾಷ್ಟ್ರದ ಏಕತೆ, ಭದ್ರತೆ ಮತ್ತು ಸಾಮಾಜಿಕ ಸೌಹಾರ್ದತೆಗೆ ಅಪಾಯಕಾರಿ ಎಂದು ವಾದಿಸಲಾಗಿದೆ.
ವಜಾಗೆ ಒತ್ತಾಯ ಮತ್ತು ನಿಯೋಗದಲ್ಲಿನ ಸದಸ್ಯರು
“ಜನಪ್ರತಿನಿಧಿಗಳಾಗಿ ರಾಜ್ಯಪಾಲರ ಗೌರವ ಕಾಪಾಡುವುದು ನಮ್ಮ ಕರ್ತವ್ಯ. ಸಂವಿಧಾನದ ಪ್ರಕಾರ ರಾಜ್ಯಪಾಲರು ರಾಜ್ಯದ ಶ್ರೇಷ್ಠ ಸ್ಥಾನದಲ್ಲಿದ್ದು, ಅವರ ವಿರುದ್ಧ ಅವಮಾನಕರ ಹೇಳಿಕೆಗಳು ಪ್ರಜಾಪ್ರಭುತ್ವದ ಆತ್ಮಕ್ಕೆ ಧಕ್ಕೆಯಾಗಿದೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪರಿಷತ್ತಿನ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಐವಾನ್ ಡಿಸೋಜಾ ಅವರನ್ನು ಕೂಡಲೇ ವಜಾಗೊಳಿಸುವಂತೆ ಸಭಾಪತಿಗಳಿಗೆ ಆಗ್ರಹಿಸಲಾಯಿತು.
ಮನವಿ ಸಲ್ಲಿಸಿದ ನಿಯೋಗದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಶ್ರೀ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ಶ್ರೀ ಎನ್. ರವಿಕುಮಾರ್, ಮತ್ತು ಶಾಸಕರಾದ ಶ್ರೀ ಟಿ.ಎ. ಶರವಣ, ಶ್ರೀ ಎಸ್.ವಿ. ಸಂಕನೂರ್, ಶ್ರೀ ಹನುಮಂತ ನಿರಾಣಿ, ಶ್ರೀ ಎಂ.ಜಿ. ಮೂಳೆ, ಶ್ರೀ ಪ್ರತಾಪ್ ಸಿಂಹ ನಾಯಕ್, ಶ್ರೀ ಗೋವಿಂದರಾಜು, ಶ್ರೀ ಶಾಂತರಾಮ್ ಸಿದ್ದಿ, ಶ್ರೀ ಡಿ.ಎಸ್. ಅರುಣ್, ಶ್ರೀ ಕೆ.ಎಸ್. ನವೀನ, ಡಾ. ಸಾಬಣ್ಣ ತಳವಾರ್, ಹಾಗೂ ಡಾ. ಧನಂಜಯ್ ಸರ್ಜಿ ಉಪಸ್ಥಿತರಿದ್ದರು.

