
ಹುಬ್ಬಳ್ಳಿ: ಇಲ್ಲಿನ ಬಂಕಾಪುರ ಚೌಕದ ಸಮೀಪವಿರುವ ಕುಲಕರ್ಣಿ ಓಣಿಯ (ಯಲ್ಲಾಪುರ ಓಣಿ) ಶ್ರೀ ಕೇದಾರಲಿಂಗ (ಜ್ಯೋತಿಭಾ) ದೇವಾಲಯದಲ್ಲಿ ಅಕ್ಷಯ ತೃತೀಯಾ ಹಾಗೂ ಶ್ರೀ ಜ್ಯೋತಿಭಾ ದೇವರ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವದ ನಿಮಿತ್ತ ಏಪ್ರಿಲ್ 20ರ ಸೋಮವಾರದಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಲಿದೆ.
ಅಂದು ಬೆಳಿಗ್ಗೆ 8:00 ಗಂಟೆಗೆ ಕಲಶ ಸ್ಥಾಪನೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ತದನಂತರ ಗಣಹೋಮ, ರುದ್ರ ಹವನ ಹಾಗೂ ಪೂರ್ಣಾಹುತಿ ನೆರವೇರಲಿವೆ. ಬೆಳಿಗ್ಗೆ 11:30 ಗಂಟೆಯಿಂದ ಶ್ರೀ ಜ್ಯೋತಿಭಾ ದೇವರಿಗೆ ಕುಂಭಾಭಿಷೇಕ, ಗಂಗಾಭಿಷೇಕ, ಗುಲಾಲ ಅಭಿಷೇಕ, ಗಂಧಾಭಿಷೇಕ ಹಾಗೂ ಪಂಚಾಮೃತ ಅಭಿಷೇಕಗಳು ಜರುಗಲಿವೆ. ನಂತರ ದೇವರಿಗೆ ವಿಶೇಷ ಅಲಂಕಾರ ಮಾಡಿ ಮಹಾಮಂಗಳಾರತಿ ಹಾಗೂ ನೈವೇದ್ಯ ಅರ್ಪಿಸಿದ ಬಳಿಕ ಸಾರ್ವಜನಿಕರಿಗೆ ಮಹಾಪ್ರಸಾದ ವಿತರಣೆ ನಡೆಯಲಿದೆ.

ಸಂಜೆ 7:00 ಗಂಟೆಗೆ ದೇವಾಲಯದಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗಿದ್ದು, ರಾತ್ರಿ 8:00 ಗಂಟೆಗೆ ದೇವಸ್ಥಾನದ ಆವರಣದಲ್ಲಿ ವೈಭವದ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಜ್ಯೋತಿರ್ಬಿದ್ವಾನ್ ವೇದಮೂರ್ತಿ ಶ್ರೀ ಸುಬ್ರಾಯ ವೆಂಕಟೇಶ ಭಟ್ಟ ಅವರ ಮಾರ್ಗದರ್ಶನ ಹಾಗೂ ಆಚಾರತ್ವದಲ್ಲಿ ಸಂಪನ್ನಗೊಳ್ಳಲಿವೆ ಎಂದು ದೇವಾಲಯದ ಅರ್ಚಕರು ಮತ್ತು ಸಂಚಾಲಕರಾದ ಶ್ರೀ ಬಾಲಚಂದ್ರ ಮಂ. ಯಲ್ಲಾಳ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಭಕ್ತಾದಿಗಳು 9448056617 ಅಥವಾ 9964892502 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಂಚಾಲಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

