
ಕುಂದಗೋಳ: ಇಂದಿನ ದಿನಮಾನದಲ್ಲಿ ಒಂದು ರೂಪಾಯಿ ಖರ್ಚು ಮಾಡುವ ಮುನ್ನ ಹಿಂದೆ ಮುಂದೆ ನೋಡುವ ಸನ್ನಿವೇಶದಲ್ಲಿ, ಮಾಜಿ ಶಾಸಕ ದಿ. ಗೋವಿಂದಪ್ಪ ಜುಟ್ಟಲ ಅವರ ಪುತ್ರ ಹಾಗೂ ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ ಅವರು ಪಕ್ಷದ ನಿಷ್ಠೆ ಮತ್ತು ನಾಯಕರ ಮೇಲಿನ ಗೌರವವನ್ನು ಅನಾವರಣಗೊಳಿಸಿದ್ದಾರೆ.
ತಮ್ಮ ತಂದೆಯವರ ಸ್ಮರಣಾರ್ಥ ಪಟ್ಟಣದಲ್ಲಿರುವ, ಲಕ್ಷಾಂತರ ರೂ. ಬೆಲೆ ಬಾಳುವ ಎರಡು ಗುಂಟೆ ನಿವೇಶನವನ್ನು ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ದಾನವಾಗಿ ನೀಡಿದ್ದಾರೆ. ಈ ಮೂಲಕ ಪಕ್ಷಕ್ಕಾಗಿ ಆಸ್ತಿ ದಾನ ಮಾಡಿದ ಶ್ರೇಷ್ಠ ಕಾರ್ಯ ಇದಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಆದೇಶದ ಮೇರೆಗೆ, ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಆಡಳಿತ ಮಂಡಳಿಯ ಜನರಲ್ ಸೆಕ್ರೆಟರಿ ವಿಜಯ ಮುಳಗುಂದ ಅವರು ಪಕ್ಷದ ಪರವಾಗಿ ಕುಂದಗೋಳ ನೊಂದಣಿ ಕಚೇರಿಯಲ್ಲಿ ನಿವೇಶನವನ್ನು ಅಧಿಕೃತವಾಗಿ ನೊಂದಣಿ ಮಾಡಿಸಿಕೊಂಡರು.
ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ ಅವರ ಈ ನಿಷ್ಕಳಂಕ ಸೇವೆ ಮತ್ತು ತ್ಯಾಗದ ಮನೋಭಾವ ನಿಜಕ್ಕೂ ಶ್ಲಾಘನೀಯ. ಇಂತಹ ಜನಪ್ರತಿನಿಧಿಗಳ ಕಾರ್ಯವು ಇತರರಿಗೆ ಪ್ರೇರಣೆಯ ಸೆಲೆಯಾಗಲಿದೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ.
ಸಾರ್ವಜನಿಕರ ಅಭಿಪ್ರಾಯ: “ಇಂತಹ ಉತ್ತಮ ರಾಜಕೀಯ ಸಂಸ್ಕೃತಿ ಇಂದಿನ ರಾಜಕೀಯ ನಾಯಕರಿಗೆ ದಾರಿದೀಪವಾಗಬೇಕು. ಚಂದ್ರಶೇಖರ್ ಜುಟ್ಟಲ ಅವರ ಕಾರ್ಯ ಅನುಕರಣೀಯ,” ಎಂದು ಸ್ಥಳೀಯರು ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ, ಕೆಪಿಸಿಸಿ ಸದಸ್ಯ ಎಲ್. ನಾರಾಯಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ, ಗ್ಯಾರಂಟಿ ಅನುಷ್ಠಾನ ಸಮೀತಿ ತಾಲ್ಲೂಕು ಅಧ್ಯಕ್ಷ ಸತೀಶ ಕೊಬ್ಬಯ್ಯನವರ, ಸ್ವಾತಿ ಮಾಳಗಿ, ವಸಂತ ಲದ್ವಾ, ಸಲೀಮ್ ಕ್ಯಾಲಕೊಂಡ, ವೆಂಕನಗೌಡ ಪಾಟೀಲ, ಈರಣ್ಣ ರಾಟಿ, ಸೇರಿದಂತೆ ಹಲವು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

