ಹುಬ್ಬಳ್ಳಿ: ರಾಜ್ಯ ಸರ್ಕಾರದ ವತಿಯಿಂದ ಇದೇ ಸೆಪ್ಟೆಂಬರ್ 22, 2025 ರಂದು ನಡೆಯಲಿರುವ ಜಾತಿ ಗಣತಿಯಲ್ಲಿ ಸೂರ್ಯವಂಶ ಕ್ಷತ್ರಿಯ ಕಲಾಲ ಕಾಟಿಕ್ ಸಮಾಜದ ಬಂಧುಗಳು ತಪ್ಪದೆ ಪಾಲ್ಗೊಳ್ಳಬೇಕು ಎಂದು ಸಮಾಜದ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
‘ಸುವರ್ಣ ಕರ್ನಾಟಕ ಸೂರ್ಯವಂಶ ಕ್ಷತ್ರಿಯ ಕಲಾಲ ಕಾಟಿಕ್ ಸಮಾಜ’ದ ವತಿಯಿಂದ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಭಾಗವಾಗಿ ಸಮೀಕ್ಷೆದಾರರು ಪ್ರತಿ ಮನೆಮನೆಗೂ ಭೇಟಿ ನೀಡಲಿದ್ದು, ಸಮುದಾಯದವರು ಸಮೀಕ್ಷೆಯಲ್ಲಿ ತಮ್ಮ ಜಾತಿ ಹಾಗೂ ಧರ್ಮವನ್ನು ಸರಿಯಾಗಿ ನಮೂದಿಸುವಂತೆ ಕೋರಲಾಗಿದೆ. ಈ ಸಂದರ್ಭದಲ್ಲಿ, ಸಮೀಕ್ಷಾ ಪತ್ರದ ಕಾಲಂ 8ರಲ್ಲಿ ‘ಹಿಂದೂ’ ಧರ್ಮ ಎಂದು, ಮತ್ತು ಕಾಲಂ 9ರಲ್ಲಿ ‘ಕಾಟಿಕ್’ ಅಥವಾ ‘ಖಟೀಕ್’ ಎಂದು ನಮೂದಿಸಬೇಕು ಎಂದು ಸಮಾಜದ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಮಾಜದ ಪದಾಧಿಕಾರಿಗಳು, ಸರ್ಕಾರ ಜಾತಿವಾರು ಲೆಕ್ಕಾಚಾರಗಳನ್ನು ಸಂಗ್ರಹಿಸುತ್ತಿದ್ದು, ಸಮುದಾಯದ ಎಲ್ಲ ಸದಸ್ಯರು ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಮುದಾಯದ ಬಲ ಮತ್ತು ಸಾಮಾಜಿಕ ಸ್ಥಿತಿಗತಿಗಳು ಸರ್ಕಾರದ ಗಮನಕ್ಕೆ ಬರಲು ಸಹಾಯವಾಗುತ್ತದೆ. ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ಸಮುದಾಯದ ಸಂಘಟನೆಗಳು ಈ ಬಗ್ಗೆ ಜಾಗೃತಿ ಮೂಡಿಸುತ್ತಿವೆ.
ರಾಜ್ಯ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಯುವ ಘಟಕ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಈ ಮನವಿಯನ್ನು ಮಾಡಿಕೊಂಡಿದ್ದಾರೆ.

