ಅಬಕಾರಿ ಇಲಾಖೆ ಭ್ರಷ್ಟಾಚಾರದ ಅಖಾಡ: 6 ಸಾವಿರ ಕೋಟಿ ಹಗರಣದ ಆರೋಪ

Spread the love

ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆಯು ಭ್ರಷ್ಟಾಚಾರದಲ್ಲಿ ‘ನಂಬರ್ ಒನ್’ ಸ್ಥಾನದಲ್ಲಿದ್ದು, ಇಲಾಖೆಯಲ್ಲಿ ಸುಮಾರು 6 ಸಾವಿರ ಕೋಟಿ ರೂಪಾಯಿಗಳ ಬೃಹತ್ ಹಗರಣ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಈ ವಿಷಯ ಪ್ರಸ್ತಾಪಿಸಿದ ಅವರು, ಸರ್ಕಾರ ಮತ್ತು ಸಚಿವರ ವಿರುದ್ಧ ದಾಖಲೆ ಸಹಿತ ವಾಗ್ದಾಳಿ ನಡೆಸಿದರು.

​ಅಬಕಾರಿ ಇಲಾಖೆಯು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಕೇಂದ್ರವಾಗಿದೆ. ರಾಜ್ಯದಲ್ಲಿರುವ 14,229 ಮದ್ಯದಂಗಡಿಗಳಿಂದ ಪ್ರತಿ ತಿಂಗಳು ಹಫ್ತಾ ವಸೂಲಿ ಮಾಡಲಾಗುತ್ತಿದೆ. ಪ್ರತಿ ಸನ್ನದುದಾರರಿಂದ ಮಾಸಿಕ 10 ರಿಂದ 15 ಸಾವಿರ ರೂಪಾಯಿಯಂತೆ ವಾರ್ಷಿಕವಾಗಿ ಕನಿಷ್ಠ 252 ಕೋಟಿ ರೂಪಾಯಿ ಅಕ್ರಮ ಹಣ ಸಂಗ್ರಹವಾಗುತ್ತಿದೆ ಎಂದು ಅಶೋಕ್ ಎಳೆಎಳೆಯಾಗಿ ಬಿಡಿಸಿಟ್ಟರು.

ಸಚಿವರ ರಾಜೀನಾಮೆಗೆ ಪಟ್ಟು:

ಈ ಹಗರಣದ ಹೊಣೆ ಹೊತ್ತು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ವರ್ಗಾವಣೆ, ಸನ್ನದು ಹೆಸರು ಬದಲಾವಣೆ ಹಾಗೂ ಹೊಸ ಪರವಾನಗಿ ನೀಡಲು ಲಕ್ಷಾಂತರ ರೂಪಾಯಿ ಲಂಚ ನಿಗದಿಯಾಗಿದೆ ಎಂದು ಪ್ರತಿಪಕ್ಷಗಳು ದೂರಿದವು.

💸 ಭ್ರಷ್ಟಾಚಾರದ ‘ದರಪಟ್ಟಿ’ ಮತ್ತು ಹಗರಣದ ಅಂಕಿ-ಅಂಶಗಳು

  • ವಾರ್ಷಿಕ ಹಫ್ತಾ ವಸೂಲಿ: ಕನಿಷ್ಠ ₹252 ಕೋಟಿ (ಪ್ರತಿ ಅಂಗಡಿಯಿಂದ ಮಾಸಿಕ ₹10-15 ಸಾವಿರ).
  • ಹೊಸ ಪರವಾನಗಿ (ಲೈಸೆನ್ಸ್): ₹50 ಲಕ್ಷದಿಂದ ₹1 ಕೋಟಿವರೆಗೆ ಲಂಚ.
  • ಹೆಸರು ಬದಲಾವಣೆ: ₹5 ಲಕ್ಷದಿಂದ ₹10 ಲಕ್ಷ.
  • ಸಿಬ್ಬಂದಿ ವರ್ಗಾವಣೆ: ₹10 ಲಕ್ಷದಿಂದ ₹15 ಲಕ್ಷ.
  • ಮೈಕ್ರೋ ಬ್ರಿವರಿ ಅನುಮತಿ: ₹1.50 ಕೋಟಿ ಬೇಡಿಕೆ.

ಮೂರು ಆಡಿಯೋಗಳ ಬಾಂಬ್:

ಸದನದಲ್ಲಿ ಆರ್. ಅಶೋಕ್ ಅವರು ಮೂರು ಪ್ರಮುಖ ಆಡಿಯೋ ಸಂವಾದಗಳನ್ನು ಬಿಡುಗಡೆ ಮಾಡುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಜಂಟಿ ಆಯುಕ್ತ ನಾಗರಾಜಪ್ಪ ಹಾಗೂ ವಕೀಲ ರಮೇಶ್ ನಡುವಿನ ಸಂಭಾಷಣೆಯಲ್ಲಿ ಸಚಿವರ ಮಗನ ಹೆಸರನ್ನು ಉಲ್ಲೇಖಿಸಿರುವುದು, ಮಂಡ್ಯದ ಸುಂದರ್ ಎಂಬುವರಿಗೆ ಸಚಿವರು ಹಾಗೂ ಸಿಎಂ ಪುತ್ರ ಯತೀಂದ್ರ ಅವರನ್ನು ಭೇಟಿ ಮಾಡುವಂತೆ ಅಧಿಕಾರಿಗಳು ಸಲಹೆ ನೀಡಿರುವುದು ಮತ್ತು ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಜಗದೀಶ್ ನಾಯ್ಕ್ ಎಂಬುವರ ‘ವಿಟಮಿನ್ ಎಂ’ (ಹಣ) ಬೇಡಿಕೆಯ ಆಡಿಯೋಗಳು ಸದನದಲ್ಲಿ ಸದ್ದು ಮಾಡಿದವು.

ಹುಬ್ಬಳ್ಳಿ ಕಾರ್ಯಕ್ರಮದ ಮೇಲೆ ವಾಗ್ದಾಳಿ:

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮನೆ ಹಂಚಿಕೆ ಕಾರ್ಯಕ್ರಮದ ವೇಳೆ ಅಬಕಾರಿ ಅಧಿಕಾರಿಯೊಬ್ಬರು ಮದ್ಯದ ವ್ಯಾಪಾರ ಹೆಚ್ಚಿಸಲು ಸನ್ನದುದಾರರಿಗೆ ವಾಟ್ಸಾಪ್ ಸಂದೇಶ ಕಳುಹಿಸಿರುವುದನ್ನು ಅಶೋಕ್ ಖಂಡಿಸಿದರು. “ಅದು ಮನೆ ಹಂಚುವ ಕಾರ್ಯಕ್ರಮವೋ ಅಥವಾ ಮದ್ಯ ಹಂಚಿ ಮನೆ ಪಾಳು ಮಾಡುವ ಕಾರ್ಯಕ್ರಮವೋ?” ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು. ಹಗರಣದ ಈ ಹಣ ಯಾವ ರಾಜ್ಯದ ಚುನಾವಣೆಗೆ ಬಳಕೆಯಾಗುತ್ತಿದೆ ಮತ್ತು ಹೈಕಮಾಂಡ್‌ಗೆ ಎಷ್ಟು ಪಾಲು ಹೋಗುತ್ತಿದೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

Leave a Reply

Your email address will not be published. Required fields are marked *