

ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ವಜಾ: ಷಡ್ಯಂತ್ರದ ಆರೋಪ, ಹೈಕಮಾಂಡ್ ನಿರ್ಧಾರಕ್ಕೆ ಡಿಕೆಶಿ ಬದ್ಧತೆ
ಬೆಂಗಳೂರು: ಸಚಿವ ಸಂಪುಟದಿಂದ ತಮ್ಮನ್ನು ವಜಾ ಮಾಡಿರುವುದರ ಹಿಂದೆ ಷಡ್ಯಂತ್ರವಿದೆ ಎಂದು ಕೆ.ಎನ್. ರಾಜಣ್ಣ ಎಂದು ಪ್ರತಿಕ್ರಿಯಿಸಿದರು. “ಕಾಲ ಬಂದಾಗ ಯಾರು, ಏನು ಎನ್ನುವುದನ್ನು ಹೇಳುತ್ತೇನೆ” ಎಂದು ಅವರು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮೊದಲ ಪ್ರತಿಕ್ರಿಯೇ ನೀಡಿ ಮಾತನಾಡಿದ ಕೆ ಎನ್ ರಾಜಣ್ಣ ಅವರು, “ನನ್ನನ್ನು ಸಂಪುಟದಿಂದ ತೆಗೆದಿರುವ ಬಗ್ಗೆ ಹೈಕಮಾಂಡ್ಗೆ ಮುಜುಗರ ಮಾಡಲು ನಾನು ಬಯಸುವುದಿಲ್ಲ. ಈಗ ಪಕ್ಷದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ” ಎಂದರು. ಅಲ್ಲದೆ, “ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಅವರನ್ನು ಭೇಟಿಯಾಗಿ ನನ್ನ ಬಗ್ಗೆ ಇರುವ ತಪ್ಪು ಗ್ರಹಿಕೆಯನ್ನು ನಿವಾರಿಸುವ ಪ್ರಯತ್ನ ಮಾಡುತ್ತೇನೆ” ಎಂದು ತಿಳಿಸಿದರು. ರಾಜ್ಯಪಾಲರ ಕಚೇರಿಯಿಂದ ವಜಾ ಮಾಡಿರುವುದಾಗಿ ಪತ್ರ ಬಂದಿದ್ದು, ಮಾಜಿ ಸಚಿವನಾಗಿ ಬಹಳ ಸಂತೋಷವಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಚಲುವರಾಯಸ್ವಾಮಿ, ಡಾ. ಎನ್.ಸಿ. ಸುಧಾಕರ್ ಸೇರಿದಂತೆ ಹಲವು ಶಾಸಕರು ಹಾಜರಿದ್ದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿ:
ರಾಜಣ್ಣ ಅವರನ್ನು ವಜಾ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ನಾವೆಲ್ಲರೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು” ಎಂದರು. ಆದರೆ, ಈ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಅವರು ಹೇಳಿದರು. “ನಮ್ಮ ಪಕ್ಷ ಎಲ್ಲವನ್ನೂ ನೋಡುತ್ತದೆ. ಯಾವ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಹೇಳಿದರು.
ರಾಜ್ಯಪಾಲರ ಆದೇಶ
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, ರಾಜ್ಯಪಾಲರು ರಾಜಣ್ಣ ಅವರನ್ನು ತತ್ಕ್ಷಣ ಸಂಪುಟದಿಂದ ಕೈಬಿಡಲು ಸಹಿ ಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಪತ್ರದ ಮೂಲಕವೇ ರಾಜಣ್ಣ ಅವರ ವಜಾ ಅಧಿಕೃತಗೊಂಡಿದೆ.

