ಹುಬ್ಬಳ್ಳಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ: ನಾಳೆ ಸತ್ಯನಾರಾಯಣ ಪೂಜೆ ಮತ್ತು ಪ್ರಸಾದ ವಿತರಣೆ

Spread the love

ಹುಬ್ಬಳ್ಳಿ: ಗಣೇಶ ಚತುರ್ಥಿ ಉತ್ಸವದ ಅಂಗವಾಗಿ ಹುಬ್ಬಳ್ಳಿಯ ಗಣೇಶಪೇಟೆಯ ಮುಕ್ಕೇರಿ ಓಣಿಯಲ್ಲಿರುವ ಶ್ರೀ ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜ ಹಾಗೂ ಯುವಕ ಮಂಡಳ (ಲ) ವತಿಯಿಂದ ಸೆಪ್ಟೆಂಬರ್ 1, ಸೋಮವಾರದಂದು ಒಂದು ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮಿತಿಯ ಪ್ರಕಟಣೆಯ ಪ್ರಕಾರ, ಗಜಾನನ ಉತ್ಸವದ ಆರನೇ ದಿನದಂದು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಸಾಯಂಕಾಲ 6 ಗಂಟೆಗೆ ಪ್ರಸಾದ ವಿತರಣೆ ವಿಜೃಂಭಣೆಯಿಂದ ಜರುಗಲಿದೆ.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಪ್ರಸಾದ ಅಬ್ಬಯ್ಯ, ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಮಹೇಶ ತೆಂಗಿನಕಾಯಿ, ಹು-ಧಾ ಪೊಲೀಸ್ ಆಯುಕ್ತರಾದ ಶ್ರೀ ಎನ್.ಶಶಿಕುಮಾರ, ಕೆ.ಜೆ.ಪಿ. ಫೌಂಡೇಶನ್ ಸಂಸ್ಥಾಪಕರಾದ ಶ್ರೀ ಶ್ರೀಗಂಧ ಗಣೇಶ ಶೇಟ್ ಮತ್ತು ಹು-ಧಾ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಇಲಿಯಾಸ್ ಮನಿಯಾರ ಅವರು ಆಗಮಿಸಲಿದ್ದಾರೆ.

ಈ ಸಮಯದಲ್ಲಿ ಶ್ರೀ ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜದ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಎಂ. ಗಂಡಗಾಳೇಕರ್, ಹುಬ್ಬಳ್ಳಿ ಘಟಕದ ಅಧ್ಯಕ್ಷರಾದ ಸದಾನಂದ್ ಖಜೂರ್ಕರ್ ಹಾಗೂ ಉಪಾಧ್ಯಕ್ಷರಾದ ಕೃಷ್ಣ ಎಂ. ಗಂಡಗಾಳೇಕರ ಅವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಲಿದ್ದಾರೆ.

ಪ್ರದೀಪ್ ಜಿಗಿನಿಕರ್, ವಿನಾಯಕ್ ಮಹೇಂದ್ರಕರ್, ಶ್ರೀನಿವಾಸ್ ತಪಸ್ಕರ್, ಮನೋಜ್ ಭೀಮಕರ ಸೇರಿದಂತೆ ಸೂರ್ಯವಂಶ ಕ್ಷತ್ರಿಯ ಕಲಾಲ ಸಮಾಜದ ಹುಬ್ಬಳ್ಳಿ ಘಟಕ, ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಎಲ್ಲಾ ಸದಸ್ಯರು ಉಪಸ್ಥಿತರಿರಲಿದ್ದಾರೆ.

ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ವೃದ್ಧಿಸುವಲ್ಲಿ ಈ ಗಣೇಶೋತ್ಸವವು ಮಹತ್ವದ ಪಾತ್ರ ವಹಿಸುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಕೋರಲಾಗಿದೆ ಎಂದು ಸಮಿತಿ ತಿಳಿಸಿದೆ.

Leave a Reply

Your email address will not be published. Required fields are marked *