
ಎಸ್ಸಿ/ಎಸ್ಟಿ ರೈತರಿಗೆ ಶೇ. 90 ಸಹಾಯಧನ; ಅರ್ಜಿ ಸಲ್ಲಿಸಿದ ತಕ್ಷಣವೇ ಅನುದಾನ ಬಿಡುಗಡೆ ಭರವಸೆ
ಧಾರವಾಡ: ನವೆಂಬರ್ 25: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಘಟಕದ ಕಾರ್ಯಕ್ರಮದಡಿ ತುಂತುರು ನೀರಾವರಿ (ಸ್ಪಿಂಕ್ಲರ್) ಘಟಕವನ್ನು ಪಡೆದುಕೊಳ್ಳಲು ಅರ್ಹ ರೈತರಿಂದ ಕೃಷಿ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಸ್ತುತ ಸಾಲಿನಲ್ಲಿ ಈ ಕಾರ್ಯಕ್ರಮ ನಿಗದಿಯಾಗಿದ್ದು, ಎಲ್ಲಾ ವರ್ಗದ ರೈತರಿಗೂ ಶೇ. 90ರಷ್ಟು ಸಹಾಯಧನದಲ್ಲಿ ಈ ಘಟಕವನ್ನು ವಿತರಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್ಸಿ/ಎಸ್ಟಿ ರೈತರಿಗೆ ವಿಶೇಷ ಅವಕಾಶ:
ವಿಶೇಷವಾಗಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ಸಿ/ಎಸ್ಟಿ) ಘಟಕದಡಿ ತುಂತುರು ನೀರಾವರಿ ಘಟಕಕ್ಕಾಗಿ ಸಾಕಷ್ಟು ಅನುದಾನ ಲಭ್ಯವಿದೆ. ಈ ವರ್ಗದ ಅರ್ಹ ರೈತ ಫಲಾನುಭವಿಗಳು ಅರ್ಜಿ ಸಲ್ಲಿಸಿದ ಕೂಡಲೇ ಸಹಾಯಧನವನ್ನು ಬಿಡುಗಡೆ ಮಾಡಲು ಇಲಾಖೆ ಕ್ರಮ ಕೈಗೊಂಡಿದೆ.
ಆದ್ದರಿಂದ, ತುಂತುರು ನೀರಾವರಿ (ಸ್ಪಿಂಕ್ಲರ್) ಘಟಕವನ್ನು ಪಡೆದುಕೊಳ್ಳಲು ಇಚ್ಛಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ತಡಮಾಡದೆ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ತಾಲ್ಲೂಕುಗಳ ಸಹಾಯಕ ನಿರ್ದೇಶಕರುಗಳಾದ ಧಾರವಾಡದ ರಾಜಶೇಖರ ಅನಗೌಡರ (8277931282), ಹುಬ್ಬಳ್ಳಿಯ ಮಂಜುಳಾ ತೆಂಬದ (8277931288), ಕಲಘಟಗಿಯ ಅಮರ ನಾಯ್ಕರ (8277931291), ಕುಂದಗೋಳದ ಭಾರತಿ ಮೆಣಸಿನಕಾಯಿ (9071449976), ಮತ್ತು ನವಲಗುಂದದ ರವೀಂದ್ರಗೌಡ ಪಾಟೀಲ (8277931295) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

