
ಕುಂದಗೋಳ: ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯ (NSS) ವಾರ್ಷಿಕ ಶಿಬಿರಗಳು ಅತ್ಯಂತ ಸಹಕಾರಿಯಾಗುತ್ತವೆ ಎಂದು ಸಂಶಿಯ ಕೆಎಲ್ಇ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷರಾದ ಎ.ಬಿ. ಉಪ್ಪಿನ ಅವರು ಹೇಳಿದರು. ಅವರು ದತ್ತು ಗ್ರಾಮವಾದ ಪಶುಪತಿಹಾಳದಲ್ಲಿ ಶುಕ್ರವಾರದಂದು ಜರುಗಿದ ಕೆಎಲ್ಇ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಡಗೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಶ್ರೀಕಾಂತ ಕೆ.ಎನ್. ಅವರು ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ಆದರ್ಶ ಮತ್ತು ಮಾದರಿ ವ್ಯಕ್ತಿಯಾಗಿ ಬಾಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಶುಪತಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರೇಣವ್ವ ಮ. ಮಲ್ಲಾಪುರ ಅವರು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಿ.ಎಂ. ಕಜ್ಜಿ, ಸಂಜೀವ ಕಟಗಿ, ಸಹದೇವಪ್ಪ ಡೊಳ್ಳಿನ, ಸಿದ್ದಪ್ಪ ಡೊಳ್ಳಿನ, ಮೈಲಾರಪ್ಪ ಮಲ್ಲಾಪುರ, ಹಾಗೂ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ರಮೇಶ ಯ. ಅತ್ತಿಗೇರಿ, ಸಿಬ್ಬಂದಿ ವರ್ಗದವರಾದ ಡಾ. ಎಂ.ಸಿ. ಅಂಗಡಿ, ಎ.ಎಸ್. ಹುಲ್ಲಾರ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಎಸ್.ಸಿ. ಅಂಗಡಿ ಸ್ವಾಗತಿಸಿದರು. ಡಿ.ಸಿ. ಕರಿಗೇರ ವಂದಿಸಿದರು ಮತ್ತು ಅಶ್ವಿನಿ ಪೂಜಾರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

