
ಧಾರವಾಡ, ನ.14: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಡಾ. ಬಿ.ಆರ್. ಅಂಬೇಡ್ಕರ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ರಾಷ್ಟ್ರೀಯ ದತ್ತು ಮಾಸಾಚರಣೆ–2025 ಅಂಗವಾಗಿ ಕಾನೂನು ಅರಿವು–ನೆರವು ಕಾರ್ಯಕ್ರಮವನ್ನು ಬುದ್ಧ ರಕ್ಷೀತ ವಸತಿ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರುಶುರಾಮ್ ಎಫ್. ದೊಡ್ಡಮನಿ ಉದ್ಘಾಟಿಸಿ ಮಾತನಾಡಿದರು. “1929ರಲ್ಲಿ ಸಂವಿಧಾನಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸ್ಥಾಪಿಸಿದ ಈ ಶಾಲೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುವುದು ಪುಣ್ಯ. ಮಕ್ಕಳು ಈ ಪವಿತ್ರ ಭೂಮಿಯಲ್ಲಿ ಚೆನ್ನಾಗಿ ಓದಿ, ಅಂಬೇಡ್ಕರ್ ಅವರು ತೋರಿಸಿದ ಮಾರ್ಗದಲ್ಲಿ ಬೆಳೆಯಬೇಕು. ಇಂದಿನ ಮಕ್ಕಳು ನಾಳಿನ ಪ್ರಜೆಗಳು; ಆದ್ದರಿಂದ ಪ್ರತಿಯೊಬ್ಬ ಭಾರತೀಯನಿಗೂ ಸಂವಿಧಾನದ ಸಂಪೂರ್ಣ ಅರಿವು ಅನಿವಾರ್ಯ,” ಎಂದು ಹೇಳಿದರು. ಕಡ್ಡಾಯ ಶಿಕ್ಷಣ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು ಎಂದುವೂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ಯಾನೆಲ್ ವಕೀಲರಾದ ಪ್ರಭಾವತಿ ದೇಸಾಯಿ ಮತ್ತು ಕಾನೂನು ಸ್ವಯಂಸೇವಕರಾದ ಮಹ್ಮದಲಿ ತಹಶೀಲ್ದಾರ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಜಿ.ಎಚ್. ನಾಗಾವಿ ವಹಿಸಿದ್ದರು. ಅತಿಥಿಗಳಾಗಿ ಸರ್ಕಾರಿ ವಕೀಲ ಎಸ್.ಎನ್. ಚಿಕ್ಕಣ್ಣವರ್, ಪ್ರೊ. ಕೆ.ಜಿ. ಆಡೂರ್, ಸಂತೋಷ್ ಜಕಪ್ಪನವರ್, ಬಿ.ಕೆ. ಹಲಗಿ, ಸಿದ್ದಾರ್ಥ ಶಿವಶರಣ, ಸಹನಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

