ನನ್ನ ಗಣತಿ ದೇಶದ ಶಕ್ತಿ: ಸ್ವಯಂ ಗಣತಿಯಲ್ಲಿ ಭಾಗವಹಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ

Spread the love

ಧಾರವಾಡ: ದೇಶದ ಭವಿಷ್ಯದ ಯೋಜನೆಗಳು ಮತ್ತು ಅಭಿವೃದ್ಧಿಯ ದಿಕ್ಸೂಚಿಯಾಗಿರುವ 2027ರ ಜನಗಣತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಹಾಗೂ ಡಿಜಿಟಲ್ ಇಂಡಿಯಾ ಅಭಿಯಾನದಡಿ ಲಭ್ಯವಿರುವ ‘ಸ್ವಯಂ ಗಣತಿ’ (Self-Enumeration) ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಕರೆ ನೀಡಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನಗಣತಿಯು ಕೇವಲ ಅಂಕಿ-ಅಂಶಗಳ ಸಂಗ್ರಹವಲ್ಲ, ಇದು ಸುಭದ್ರ ಭಾರತದ ನಿರ್ಮಾಣಕ್ಕೆ ನಾಗರಿಕರು ನೀಡುವ ಅಳಿಲು ಸೇವೆಯಾಗಿದೆ. ಈಗಾಗಲೇ ನಾನು ನನ್ನ ಕುಟುಂಬದ ವಿವರಗಳನ್ನು ಆನ್‌ಲೈನ್ ಮೂಲಕ ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 15, 2026ರವರೆಗೆ ಈ ಡಿಜಿಟಲ್ ಸೌಲಭ್ಯ ಲಭ್ಯವಿದ್ದು, ನಾಗರಿಕರು ನಿಗದಿತ ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಮೊಬೈಲ್ ಸಂಖ್ಯೆಯ ಒಟಿಪಿ ಮೂಲಕ ಲಾಗಿನ್ ಆಗಿ ವಿವರಗಳನ್ನು ಭರ್ತಿ ಮಾಡಬಹುದಾಗಿದೆ.

​ಸ್ವಯಂ ಗಣತಿಯಿಂದ ಸಮಯ ಉಳಿತಾಯವಾಗುವುದಲ್ಲದೆ, ನಿಖರ ಮಾಹಿತಿ ದಾಖಲಿಸಲು ಸಹಕಾರಿಯಾಗುತ್ತದೆ. ವಿವರಗಳನ್ನು ದಾಖಲಿಸಿದ ನಂತರ ದೊರೆಯುವ ಎಸ್‌ಇ ಐಡಿ (SE ID) ಅನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಗಣತಿದಾರರು ಮನೆಗೆ ಬಂದಾಗ ಈ ಐಡಿ ನೀಡಿದರೆ ಅವರು ವಿವರಗಳನ್ನು ತಕ್ಷಣವೇ ದೃಢೀಕರಿಸುತ್ತಾರೆ. ‘ನನ್ನ ಗಣತಿ, ದೇಶದ ಶಕ್ತಿ’ ಎಂಬ ಮಂತ್ರದೊಂದಿಗೆ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರು ಈ ರಾಷ್ಟ್ರೀಯ ಅಭಿಯಾನದಲ್ಲಿ ಭಾಗವಹಿಸಿ, ಸುಭದ್ರ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಚಿವರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *