
ರಾಣೇಬೆನ್ನೂರ : ತಾಲ್ಲೂಕಿನ ಹೊಳೆ ಆನ್ವೇರಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಅವರ ಜನ್ಮದಿನದ ಅಂಗವಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ವಾತ್ಸಲ್ಯ’ ಯೋಜನೆಯಡಿ ತಾಲೂಕಿನ ಹೊಳೆ ಆನ್ವೇರಿ ಗ್ರಾಮದ ಅಸಹಾಯಕ ಸದಸ್ಯರಿಗೆ ಹಾಗೂ ನೂತನ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಹಣ್ಣು-ಹಂಪಲ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಮಂಜುನಾಥಗೌಡ ಎಂ. ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ಕಟ್ಟಕಡೆಯ ವ್ಯಕ್ತಿ ಹಾಗೂ ನಿರ್ಗತಿಕರ ಏಳಿಗೆಗಾಗಿ ಹತ್ತು ಹಲವು ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿಯಿಂದ ರೂಪಿಸುವ ಪ್ರತಿ ಯೋಜನೆಯ ಯಶಸ್ಸಿನ ಹಿಂದೆ ಹೇಮಾವತಿ ಅಮ್ಮನವರ ಸಹಕಾರ ಅತೀವವಾಗಿದೆ. ಅವರ ಜನ್ಮದಿನದ ಈ ಸಂದರ್ಭದಲ್ಲಿ ತಾಲೂಕಿನಾದ್ಯಂತ ಸುಮಾರು 48ಕ್ಕೂ ಹೆಚ್ಚು ಅಸಹಾಯಕ ಸದಸ್ಯರ ಮನೆಗಳಿಗೆ ಭೇಟಿ ನೀಡಿ ಹಣ್ಣು-ಹಂಪಲ ವಿತರಿಸುವ ಮೂಲಕ ಅವರ ನೆಮ್ಮದಿಯ ಬದುಕಿಗೆ ಬೆನ್ನೆಲುಬಾಗಿ ನಿಲ್ಲುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಯೋಜನಾಧಿಕಾರಿ ಶೋಭಾ ಹೆಚ್., ಆಯಾ ವಲಯಗಳ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಗ್ರಾಮದ ಗಣ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು ಹಣ್ಣು ಹಂಪಲ ವಿತರಣೆಯಲ್ಲಿ ಪಾಲ್ಗೊಂಡಿದ್ದರು. ಹೆಗ್ಗಡೆ ಅವರ ಕುಟುಂಬದ ಈ ಜನಪರ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

