ಬಳ್ಳಾರಿ ಹೊಸ ಬೈಪಾಸ್ ರಸ್ತೆ ಲೋಕಾರ್ಪಣೆ: “ಅಖಂಡ ಬಳ್ಳಾರಿ ಅಭಿವೃದ್ಧಿಯತ್ತ ಸಾಗುತ್ತಿದೆ” – ಸಂಸದ ಈ. ತುಕಾರಾಮ್

Spread the love

ಬಳ್ಳಾರಿ: ನ 28: ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ (ಎನ್‌ಹೆಚ್-67) ಯೋಜನೆಯಡಿ ವೇಣಿವೀರಾಪುರದಿಂದ ಹಗರಿವರೆಗೆ ನಿರ್ಮಿಸಲಾದ ಹೊಸ ಬೈಪಾಸ್ ರಸ್ತೆಯನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ. ತುಕಾರಾಮ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದ್ದು, ಅಖಂಡ ಬಳ್ಳಾರಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು.

​ಈ ಹೆದ್ದಾರಿಯು ಹೊಸಪೇಟೆಯಿಂದ ಆಂಧ್ರ-ಕರ್ನಾಟಕ ಗಡಿಭಾಗದವರೆಗೆ ಒಟ್ಟು 95.370 ಕಿ.ಮೀ ಉದ್ದವಿದ್ದು, ₹830.28 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಶೇ. 78ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹೊಸಪೇಟೆ ಭಾಗದ ಭುವನಹಳ್ಳಿ, ವಡ್ಡರಹಳ್ಳಿ, ಗಾದಿಗನೂರು ಭಾಗದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸೇರಿದಂತೆ ಇನ್ನು ಕೆಲ ಕೆಲಸಗಳು ಬಾಕಿ ಇವೆ ಎಂದು ಸಂಸದರು ಮಾಹಿತಿ ನೀಡಿದರು.

​🚗 ಸುಗಮ ಸಂಚಾರಕ್ಕೆ ಒತ್ತು

​ನಗರದ ಸುಧಾಕ್ರಾಸ್ ಬಳಿಯ ಹಳೆಯ ಅವೈಜ್ಞಾನಿಕ ಬೈಪಾಸ್ ರಸ್ತೆಯಿಂದ ಭಾರೀ ಗಾತ್ರದ ವಾಹನಗಳು ಸಂಚರಿಸುತ್ತಿದ್ದ ಕಾರಣ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಈಗ ಸುಮಾರು 25 ಕಿ.ಮೀ ಉದ್ದದ ಈ ಹೊಸ ಬೈಪಾಸ್ ರಸ್ತೆ ಆರಂಭಗೊಳ್ಳುವುದರಿಂದ ಜನರಿಗೆ ಅನುಕೂಲವಾಗಲಿದೆ. ಹಾಗಾಗಿ ಜಿಲ್ಲೆಯ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಮೊದಲು ಒತ್ತು ನೀಡಲಾಗಿದೆ ಎಂದು ಸಂಸದರು ಸ್ಪಷ್ಟಪಡಿಸಿದರು.

​ಅದೇ ರೀತಿ, ನಗರದ ಹೊಸ ಬೈಪಾಸ್ ರಸ್ತೆಯಿಂದ ಸುಧಾಕ್ರಾಸ್ ಮೂಲಕ ಕೌಲ್ ಬಜಾರ್ ವರೆಗೆ 4ಲೇನ್ ರಸ್ತೆ ಮಾಡಲು ಡಿಪಿಆರ್ ಸಿದ್ಧಗೊಳ್ಳುತ್ತಿದೆ. ಸುಂದರವಾದ ರಸ್ತೆ ನಿರ್ಮಾಣ ಮಾಡಲಾಗುವುದು. ಸುಧಾಕ್ರಾಸ್ ಬಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ದುರ್ಗಮ್ಮ ಗುಡಿ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೈಲ್ವೇ ಇಲಾಖೆಗೆ ಈಗಾಗಲೇ ₹9 ಕೋಟಿ ನೀಡಲಾಗಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

​ಬಳ್ಳಾರಿಯಿಂದ ವೇಣಿ ವೀರಾಪುರ ಮೂಲಕ ಸಿರುಗುಪ್ಪ ರಸ್ತೆಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ಮಾಡಲು ಡಿಪಿಆರ್ ಸಿದ್ಧಗೊಳ್ಳುತ್ತಿದ್ದು, ₹230 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಒಟ್ಟಾರೆಯಾಗಿ ಬಳ್ಳಾರಿಯಲ್ಲಿ ಪೂರ್ಣ ರಿಂಗ್ ರೋಡ್ ಮೂಲಕ ಅಖಂಡ ಬಳ್ಳಾರಿಯನ್ನು ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಂಸದರು ಭರವಸೆ ನೀಡಿದರು.

​🏭 ಕೈಗಾರಿಕೆ ಮತ್ತು ಉದ್ಯೋಗದ ಕುರಿತು ಮಾಹಿತಿ

​ಕುಡತಿನಿ, ವೇಣಿವೀರಾಪುರ ಭಾಗದಲ್ಲಿ ಉದ್ಯಮ ಸ್ಥಾಪಿಸಲು ರೈತರಿಂದ ವಶಪಡಿಸಿಕೊಂಡ ಸುಮಾರು 2,659 ಎಕರೆ ಭೂಮಿಯನ್ನು ಅರ್ಸೆಲ್ಲರ್ ಮಿತ್ತಲ್ ಕಂಪನಿಗಳು ಮರಳಿಸುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ. ಎನ್‌ಎಂಡಿಸಿ ಕಂಪನಿಯು ಡಿಸೆಂಬರ್ ಅಂತ್ಯಕ್ಕೆ ನೂತನ ಕೈಗಾರಿಕೆ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ ಎಂದು ತಿಳಿಸಿದೆ. ಜೊತೆಗೆ, ಉತ್ತಮ್ ಗಾಲ್ವಾ ಕಂಪನಿಯು ಪರಿಸರ ಸ್ನೇಹಿ ಉದ್ಯಮ ಸ್ಥಾಪಿಸಲು ₹36,000 ಕೋಟಿ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದು, ಈ ಕುರಿತು ಇತ್ತೀಚೆಗೆ ಮುಖ್ಯಮಂತ್ರಿಯವರೊಂದಿಗೆ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು. ಎನ್‌ಎಂಡಿಸಿ ಕಂಪನಿಯಲ್ಲಿ ಸರೋಜಿನಿ ಮಹಿಷಿ ವರದಿ ಅಳವಡಿಸಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದು ಶಿಫಾರಸ್ಸು ಮಾಡಲಾಗಿದೆ ಎಂದೂ ತಿಳಿಸಿದರು.

​ಇದಾದ ಬಳಿಕ ಸಂಸದರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ 2024-25ನೇ ಸಾಲಿನ ಸಂಸದರ ₹10 ಲಕ್ಷ ಅನುದಾನದಲ್ಲಿ ಬಸ್ ತಂಗುದಾಣದ ಭೂಮಿಪೂಜೆ ನೆರವೇರಿಸಿದರು. ಇದೇ ವೇಳೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಗಾಗಿ 2000 ಲೀ. ಸಾಮರ್ಥ್ಯದ ಆರ್‌ಓ ಘಟಕ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

​ಈ ಸಂದರ್ಭದಲ್ಲಿ ಡಾ.ಬಾಬು ಜಗನ್ ಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಆನಂದ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *