ಧಾರವಾಡ: ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಉಳಿದಿರುವ ಸನ್ನದುಗಳನ್ನು ಇ-ಹರಾಜು ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಈ ಕುರಿತು ಬಿಡ್ಡುದಾರರಿಗೆ ಜನೆವರಿ 5 ರಂದು ವಿಶೇಷ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಭಾರತ ಸರ್ಕಾರದ ಸ್ವಾಮ್ಯದ ಎಮ್ಎಸ್ಟಿಸಿ ಲಿಮಿಟೆಡ್ನ ಇ-ಪೋರ್ಟಲ್ (https://www.mstcecommerce.com) ಮೂಲಕ ಈ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜು ಮತ್ತು ಅಂಗೀಕಾರ ಪತ್ರ (ಎಲ್ಓಎ) ನೀಡುವ ವರ್ಷವನ್ನೂ ಒಳಗೊಂಡಂತೆ ಒಟ್ಟು ಐದು ಅಬಕಾರಿ ವರ್ಷಗಳ ಅವಧಿಗೆ ಈ ಸನ್ನದುಗಳು ಅನ್ವಯಿಸಲಿವೆ. ರಾಜ್ಯದಾದ್ಯಂತ ಒಟ್ಟು 569 ಸನ್ನದುಗಳನ್ನು ಹರಾಜು ಮಾಡಲು ಉದ್ದೇಶಿಸಲಾಗಿದ್ದು, ಧಾರವಾಡ ಜಿಲ್ಲೆಗೆ ಒಟ್ಟು 15 ಸಿಎಲ್-2ಎ ಹಾಗೂ 4 ಸಿಎಲ್-9 ಸನ್ನದುಗಳನ್ನು ಹಂಚಿಕೆ ಮಾಡಲಾಗಿದೆ.
ಡಿಸೆಂಬರ್ 22, 2025 ರಿಂದಲೇ ಬಿಡ್ಡುದಾರರ ಆನ್ಲೈನ್ ನೋಂದಣಿ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಇ-ಹರಾಜು ಪ್ರಕ್ರಿಯೆಯ ಬಗ್ಗೆ ಬಿಡ್ಡುದಾರರಲ್ಲಿ ಇರುವ ಗೊಂದಲ ನಿವಾರಿಸಲು ಮತ್ತು ತಾಂತ್ರಿಕ ಮಾಹಿತಿ ನೀಡಲು ಜನೆವರಿ 5, 2026 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ರಾಯಾಪೂರದಲ್ಲಿರುವ ಕೆ.ಎಮ್.ಎಫ್ ತರಬೇತಿ ಕೇಂದ್ರದಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಅಬಕಾರಿ ಉಪ ಆಯುಕ್ತ ರಮೇಶಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ಬಿಡ್ಡುದಾರರು ಈ ತರಬೇತಿಯ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.

