
🚨 ವೈದ್ಯರು-ನರ್ಸ್ಗಳ ನಿರ್ಲಕ್ಷ್ಯಕ್ಕೆ ಮಗು ಬಲಿ: ‘ಮೊಬೈಲ್ ಮಾತುಕತೆ’ಯಲ್ಲಿ ಮಗ್ನರಾದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವರೇ ಸಚಿವರು?
ಹಾವೇರಿ: ರಾಜ್ಯದಲ್ಲಿ ಆರೋಗ್ಯ ಸೇವೆಗಳ ಸುಧಾರಣೆ ಕುರಿತು ಸರ್ಕಾರಗಳು ಎಷ್ಟೇ ಭರವಸೆ ನೀಡಿದರೂ, ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ಗಳ ಕರ್ತವ್ಯ ಲೋಪ ಹಾಗೂ ಅಮಾನವೀಯ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶುವಿನ ಅಮೂಲ್ಯ ಜೀವ ಬಲಿಯಾದ ತೀವ್ರ ಆಘಾತಕಾರಿ ಘಟನೆ ಸಂಭವಿಸಿದೆ. ಬೆಡ್ ಸಿಗದೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯೊಬ್ಬರಿಗೆ ಶೌಚಾಲಯದತ್ತ ತೆರಳುವ ಮಾರ್ಗದಲ್ಲೇ ಹೆರಿಗೆಯಾಗಿ, ಮಗು ನೆಲಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದೆ. ಮಂಗಳವಾರ (ನವೆಂಬರ್ 18, 2025) ಸಂಭವಿಸಿದ ಈ ದುರ್ಘಟನೆಯು ವೈದ್ಯಕೀಯ ವೃತ್ತಿಯ ನೈತಿಕತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ರೂಪಾ ಗಿರೀಶ್ ಕರಬಸಣ್ಣನವರ್ (30) ಎಂಬ ಗರ್ಭಿಣಿಯನ್ನು ತೀವ್ರ ಹೆರಿಗೆ ನೋವಿನೊಂದಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೆರಿಗೆ ವಾರ್ಡ್ನಲ್ಲಿ ಹಾಸಿಗೆಗಳ ಲಭ್ಯತೆ ಇಲ್ಲ ಎಂಬ ನೆಪವೊಡ್ಡಿ ಅಥವಾ ಸಿಬ್ಬಂದಿಯ ಬೇಜವಾಬ್ದಾರಿತನದಿಂದಲೋ ರೂಪಾ ಅವರಿಗೆ ಸೂಕ್ತ ಹಾಸಿಗೆ ನೀಡದೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಮಾಡಲಾಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಗರ್ಭಿಣಿ ನೋವಿನಿಂದ ಬಳಲುತ್ತಿದ್ದರೂ, ಕರ್ತವ್ಯದಲ್ಲಿದ್ದ ನರ್ಸ್ಗಳು ಮೊಬೈಲ್ ಹಿಡಿದು ಮಾತನಾಡುತ್ತಾ, ಗರ್ಭಿಣಿಯ ಸ್ಥಿತಿಯತ್ತ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದೇ ಈ ಅನಾಹುತಕ್ಕೆ ಮುಖ್ಯ ಕಾರಣವಾಗಿದೆ ಎಂದು ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ತೀವ್ರ ನೋವಿನಿಂದ ಬಳಲುತ್ತಿದ್ದರೂ ರೂಪಾ ಅವರಿಗೆ ಯಾವುದೇ ವೈದ್ಯಕೀಯ ನೆರವು ಅಥವಾ ಮಾರ್ಗದರ್ಶನ ಸಿಗಲಿಲ್ಲ. ಇದರಿಂದಾಗಿ ಅವರು ಶೌಚಾಲಯದತ್ತ ನಡೆದುಕೊಂಡು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಹೆರಿಗೆ ನೋವು ಹೆಚ್ಚಾಗಿ ಶೌಚಾಲಯಕ್ಕೆ ತೆರಳುವ ಮಾರ್ಗಮಧ್ಯೆ ಕಾರಿಡಾರ್ನಲ್ಲೇ ಹೆರಿಗೆಯಾಗಿದೆ. ಗರ್ಭಿಣಿ ನಡೆಯುತ್ತಿದ್ದಾಗಲೇ ಮಗು ಅನಿರೀಕ್ಷಿತವಾಗಿ ನೆಲಕ್ಕೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾದ ಕಾರಣ ನವಜಾತ ಶಿಶು ಸ್ಥಳಲ್ಲೇ ಮೃತಪಟ್ಟಿದೆ. ಈ ಅಮಾನವೀಯ ನಿರ್ಲಕ್ಷ್ಯದ ವಿರುದ್ಧ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ತಕ್ಷಣ ಗಮನ ಹರಿಸಿ!
ಜಿಲ್ಲಾ ಉಸ್ತುವಾರಿ ಸಚಿವರೇ, ಹಾಗೂ ಆರೋಗ್ಯ ಸಚಿವರೇ, ಮತ್ತು ಸಂಸದರೇ, ತೀವ್ರ ಖಂಡನೀಯವಾಗಿರುವ ಈ ಘಟನೆಯು ಆಸ್ಪತ್ರೆಯ ಸಿಬ್ಬಂದಿ ವೃತ್ತಿಪರತೆ ಕಳೆದುಕೊಂಡಿರುವುದನ್ನು ಸ್ಪಷ್ಟಪಡಿಸಿದೆ. ನರ್ಸ್ಗಳು ಮೊಬೈಲ್ ಹಿಡಿದು ಮಾತನಾಡಿಕೊಂಡು ಹೋಗುವ ನಿರ್ಲಕ್ಷ್ಯದಿಂದಾಗಿ ಒಂದು ಮಗು ಜೀವ ಕಳೆದುಕೊಂಡಿದೆ. ಈ ಅಮಾನವೀಯ ಘಟನೆಯತ್ತ ತಾವು ತಕ್ಷಣ ಗಮನ ಹರಿಸಿ, ಕರ್ತವ್ಯ ಲೋಪ ಎಸಗಿ ಮಗುವಿನ ಸಾವಿಗೆ ಕಾರಣರಾದ ನರ್ಸ್ಗಳು ಮತ್ತು ವೈದ್ಯರ ಮೇಲೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು.
ಆಸ್ಪತ್ರೆಯ ಸಮರ್ಥನೆ:
ಈ ಘಟನೆ ಕುರಿತು ಜಿಲ್ಲಾ ಸರ್ಜನ್ ಡಾ. ಪಿ.ಆರ್. ಹಾವನೂರು ಪ್ರತಿಕ್ರಿಯಿಸಿದ್ದು, ಮಹಿಳೆ ಬೆಳಿಗ್ಗೆ 10:27ಕ್ಕೆ ಆಸ್ಪತ್ರೆಗೆ ಬಂದಿದ್ದರು. ಆಗಲೇ ಹೆರಿಗೆ ವಾರ್ಡ್ನಲ್ಲಿ ಮೂವರಿಗೆ ಹೆರಿಗೆ ನಡೆಯುತ್ತಿತ್ತು, ಹಾಗಾಗಿ ಅವರನ್ನು ಕಾಯುವಂತೆ ಕೇಳಲಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ. ಮಹಿಳೆಯ ರಕ್ತದೊತ್ತಡ ಹೆಚ್ಚಾಗಿದ್ದು (160/100), ಸೋಮವಾರದಿಂದಲೇ ಮಗುವಿನ ಚಲನವಲನ ಇಲ್ಲ ಎಂದು ಮಹಿಳೆ ತಿಳಿಸಿದ್ದರು. ಹೀಗಾಗಿ ಮಗು ಹೆರಿಗೆಗೂ ಮುನ್ನವೇ ಗರ್ಭದಲ್ಲೇ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಡಾ. ಹಾವನೂರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಮಹಿಳೆ ಶೌಚಾಲಯಕ್ಕೆ ಹೋಗುವಾಗ ನೋವು ಹೆಚ್ಚಾಗುತ್ತಿದ್ದಂತೆಯೇ ಸಿಬ್ಬಂದಿ ಅವರನ್ನು ವಾರ್ಡ್ಗೆ ಕರೆತಂದರೂ ಅನಾಹುತ ಸಂಭವಿಸಿದ್ದು, ಘಟನೆಗೆ ಕಾರಣವಾದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಹಾವನೂರು ಭರವಸೆ ನೀಡಿದ್ದಾರೆ.

