
ರಾಜಸ್ಥಾನದ: ಜುಂಝುನೂ ಜಿಲ್ಲೆಯಲ್ಲಿರುವ ಮೋಟರ್ಸ್ ವರ್ಕ್ಶಾಪ್ವೊಂದಕ್ಕೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕನಿಷ್ಠ 18 ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಶನಿವಾರ (ನವೆಂಬರ್ 29) ತಡರಾತ್ರಿ ಈ ಘಟನೆ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.
ಜುಂಝುನೂನ ಚುರು ಬೈಪಾಸ್ ರಸ್ತೆಯ ಸಗೀರಾ ವೃತ್ತದ ಸಮೀಪವಿರುವ ‘ಮನ್ನತ್ ಮೋಟರ್ಸ್’ ಎಂಬ ವರ್ಕ್ಶಾಪ್ನಲ್ಲಿ ಈ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಮೂಲಗಳ ಪ್ರಕಾರ, ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಗ್ಯಾರೇಜ್ಗೆ ಬೆಂಕಿ ಹಚ್ಚಿದ್ದಾರೆ. ಈ ಕೃತ್ಯದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ತಿಳಿದುಬಂದಿದೆ.
ಬೆಂಕಿಯ ಕೆನ್ನಾಲಿಗೆ ಇಡೀ ವರ್ಕ್ಶಾಪ್ಗೆ ವ್ಯಾಪಿಸಿದ್ದರಿಂದ ಅಲ್ಲಿ ರಿಪೇರಿಗಾಗಿ ಇಡಲಾಗಿದ್ದ 18 ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ, ಅಷ್ಟರಾಗಲೇ ಬಹುಪಾಲು ಕಾರುಗಳು ಸುಟ್ಟುಹೋಗಿದ್ದವು.
ಗ್ಯಾರೇಜ್ಗೆ ಬೆಂಕಿ ಹಚ್ಚಲು ಭೂ ವಿವಾದವೇ ಕಾರಣ ಎಂದು ಸ್ಥಳೀಯರು ಶಂಕಿಸಿದ್ದು, ಈ ಕೃತ್ಯದಲ್ಲಿ ಭಾಗಿಯಾದ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಕೃತ್ಯದ ಹಿಂದೆ ಭೂ ವಿವಾದದ ಜೊತೆಗೆ ಬೇರೆ ಯಾವುದೇ ವೈಯಕ್ತಿಕ ದ್ವೇಷವಿದೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

