
ರಾಜಣ್ಣ ರಾಜೀನಾಮೆ ದೊಡ್ಡ ಷಡ್ಯಂತ್ರ; ಮಾಜಿ ಸಚಿವ ರಾಜೂಗೌಡ
ಯಾದಗಿರಿ: ಕಾಂಗ್ರೆಸ್ನ ಪ್ರಭಾವಿ ನಾಯಕ, ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ರಾಜೀನಾಮೆ ಒಂದು ದೊಡ್ಡ ಷಡ್ಯಂತ್ರ. ಕಾಂಗ್ರೆಸ್ ಪಾಳಯದಲ್ಲಿಯೇ ರಾಜಣ್ಣ ಅವರನ್ನು ಖೆಡ್ಡಾಕ್ಕೆ ಕೆಡವಲು ಹಲವರು ಹೊಂಚು ಹಾಕಿದ್ದರು ಎಂದು ಮಾಜಿ ಸಚಿವ ರಾಜೂಗೌಡ ಆರೋಪ ಮಾಡಿದ್ದಾರೆ.
ಜಿಲ್ಲೆಯ ಸುರಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗ ರಾಜಣ್ಣನ ರಾಜೀನಾಮೆಯಾಗಿದೆ, ಮುಂದೆ ಸಚಿವ ಸತೀಶ್ ಜಾರಕಿಹೊಳಿ ಅವರ ರಾಜೀನಾಮೆಗೂ ಸಂಚು ನಡೆಯುತ್ತಿದೆ” ಎಂದು ಸ್ಫೋಟಕ ಹೇಳಿಕೆ ನೀಡಿದರು.
ರಾಜಣ್ಣ ಅವರು ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಾಗಿದ್ದರು. ಅವರನ್ನು ಸಹಿಸದ ಕೆಲವು ಗುಂಪುಗಳು ಪದೇಪದೇ ತೊಂದರೆ ಕೊಡುತ್ತಿದ್ದರು, ಇದೀಗ ಅವರ ರಾಜೀನಾಮೆಗೆ ಕಾರಣರಾಗಿದ್ದಾರೆ ಎಂದು ರಾಜೂಗೌಡ ಆಕ್ರೋಶ ವ್ಯಕ್ತಪಡಿಸಿದರು. ಸಮುದಾಯದ ಶಾಸಕರೆಲ್ಲ ಒಟ್ಟಾಗಿ ಇದಕ್ಕೆ ಪ್ರತಿಭಟನೆ ನಡೆಸಬೇಕು ಎಂದು ಅವರು ಕರೆ ನೀಡಿದರು.
“ಹಿಂದೆ ರಮೇಶ್ ಜಾರಕಿಹೊಳಿ, ನಾಗೇಂದ್ರ ಅವರನ್ನು ವಜಾ ಮಾಡಲಾಗಿತ್ತು. ಇದೀಗ ರಾಜಣ್ಣ, ಮುಂದೆ ಸತೀಶಣ್ಣ” ಎಂದು ತಮ್ಮದೇ ಶೈಲಿಯಲ್ಲಿ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಜೂಗೌಡ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರು ಸಾಲು ಸಾಲಾಗಿ ಅಧಿಕಾರದಿಂದ ಕೆಳಗಿಳಿಯುತ್ತಿರುವುದರ ಹಿಂದೆ ‘ಮಹಾನಾಯಕ’ ಇದ್ದಾನೆ. ಅದರಲ್ಲೂ ಮುಖ್ಯವಾಗಿ ಪರಿಶಿಷ್ಟ ಪಂಗಡ (ಎಸ್.ಟಿ) ಸಮುದಾಯದ ನಾಯಕರನ್ನೇ ಗುರಿಯಾಗಿಸಲಾಗಿದೆ ಎಂದು ರಾಜೂಗೌಡ ದೂರಿದರು.
ಹಿಂದೆ ಸಚಿವ ನಾಗೇಂದ್ರ ಅವರನ್ನು ವಜಾ ಮಾಡಲಾಗಿತ್ತು, ಇದೀಗ ರಾಜೀನಾಮೆ ಮೂಲಕ ಸಚಿವ ಕೆ.ಎನ್. ರಾಜಣ್ಣ ಅವರನ್ನು ಅಧಿಕಾರದಿಂದ ದೂರ ಮಾಡಲಾಗಿದೆ ಎಂದು ರಾಜೂಗೌಡ ಅವರು ರಾಜಣ್ಣ ಪರವಾಗಿ ಬ್ಯಾಟಿಂಗ್ ಮಾಡಿದರು.

