

ಕುಂದಗೋಳ: ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ತೀವ್ರ ಸಂಚಲನ ಮೂಡಿಸಿರುವ ಒಂದು ನಿಗೂಢ ಘಟನೆಯಲ್ಲಿ, ಸುಮಾರು 40 ಕ್ಕೂ ಹೆಚ್ಚು ಎಕರೆ ಆಸ್ತಿಯ ಒಡೆಯನಾಗಿದ್ದ ಯುವಕನೋರ್ವ ತನ್ನದೇ ಮನೆಯ ಮೇಲ್ಭಾಗದ ‘ಅಟ್ಟ’ದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಕಂಡು ಬಂದಿದ್ದರೂ, ದೇಹದ ಕೆಲವು ಭಾಗಗಳಲ್ಲಿ ರಕ್ತದ ಕಲೆಗಳು ಕಂಡು ಬಂದಿರುವುದು ಈ ಪ್ರಕರಣವನ್ನು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ತೀವ್ರ ಸಂಶಯಕ್ಕೆ ದೂಡಿದೆ.
ಸಂಶಾತ್ಮಕ ಸಾವಿನ ವಿವರ:
ಮೃತರನ್ನು ಫಕ್ಕಿರೇಶ ಹನಮಂತಪ್ಪ ತಡಸದ ಎಂದು ಗುರುತಿಸಲಾಗಿದೆ. ಬುಧವಾರ (ಅ. 15) ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ವಿಷಯ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸರು ಗ್ರಾಮಕ್ಕೆ ದೌಡಾಯಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಥರದ ದುಶ್ಚಟ ಅಥವಾ ಚಟವಿಲ್ಲದ ಯುವಕ ದಿಢೀರನೆ ಆತ್ಮಹತ್ಯೆಗೆ ಶರಣಾಗಲು ಕಾರಣವೇನು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇಡೀ ಪ್ರಕರಣವು ಸಾವಿನ ಸಹಜ ಸ್ವರೂಪದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನೇಣು ಹಾಕಿಕೊಂಡಿರುವ ಜೊತೆಗೆ ರಕ್ತದ ಕಲೆಗಳು ಕಂಡು ಬಂದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯ ಪೊಲೀಸರು ಮೃತದೇಹವನ್ನು ವಿಧಿವಿಜ್ಞಾನ ತಜ್ಞರ (FSL) ನೆರವಿನೊಂದಿಗೆ ಅಟ್ಟದ ಕೋಣೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪೊಲೀಸರ ಆಳವಾದ ತನಿಖೆಯಿಂದ ಮಾತ್ರವೇ ಫಕ್ಕಿರೇಶನ ಸಾವಿನ ಅಸಲಿ ಸ್ವರೂಪ ಮತ್ತು ರಹಸ್ಯ ಬಯಲಾಗಬೇಕಿದೆ.

