
ಬೆಂಗಳೂರು: ದೇಶದ ಪ್ರಮುಖ ಸಾರಿಗೆ ಸಂಸ್ಥೆಗಳಲ್ಲಿ ಒಂದಾದ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ಪ್ರತಿಷ್ಠಿತ ‘ಸೌತ್ ಇಂಡಿಯಾ ಬ್ಯುಸಿನೆಸ್ ಪ್ರಶಸ್ತಿ’ (ಎಸ್ಐಬಿಎ) ಲಭಿಸಿದೆ. ಉದ್ಯಮ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ದುಬೈನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಭಾರತದಲ್ಲಿ ಯುಎಇ ರಾಯಭಾರಿಯಾಗಿದ್ದ ಅಹ್ಮದ್ ಅಬ್ದುಲ್ ರೆಹಮಾನ್ ಅಲ್ಪಾ ಅವರು ಆನಂದ ಸಂಕೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಉದ್ಯಮ, ಸಂಸ್ಕೃತಿ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿದವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವಿಆರ್ಎಲ್ ಸಂಸ್ಥೆಯನ್ನು ದೇಶದ ಅತಿ ದೊಡ್ಡ ಸಾರಿಗೆ ಕಂಪನಿಯಾಗಿ ಬೆಳೆಸುವಲ್ಲಿ ಮತ್ತು ಕಾರ್ಯಾಚರಣೆಯ ದಕ್ಷತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡುವಲ್ಲಿ ಆನಂದ ಸಂಕೇಶ್ವರ ಅವರ ಕೊಡುಗೆ ಅನನ್ಯವಾಗಿದೆ ಎಂದು ಪ್ರಶಸ್ತಿ ಪ್ರದಾನ ಸಮಾರಂಭದ ಸಂಘಟಕರು ತಿಳಿಸಿದ್ದಾರೆ. ಈ ಪ್ರಶಸ್ತಿಯು ಕೇವಲ ಆನಂದ ಸಂಕೇಶ್ವರ ಅವರ ವೈಯಕ್ತಿಕ ಸಾಧನೆಯಲ್ಲದೆ, ವಿಆರ್ಎಲ್ ಸಂಸ್ಥೆಯ ಕಠಿಣ ಪರಿಶ್ರಮ ಮತ್ತು ಉದ್ಯಮದಲ್ಲಿನ ಅದರ ಪ್ರಮುಖ ಸ್ಥಾನಕ್ಕೆ ಸಂದ ಗೌರವವಾಗಿದೆ.

