
ವಿಜಯಪುರ: ಮುಂಬರುವ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು 8 ರೌಡಿಗಳನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ 1,212 ರೌಡಿಶೀಟರ್ಗಳಿದ್ದು, ಇದರಲ್ಲಿ ಪ್ರಮುಖ 27 ರೌಡಿಗಳನ್ನು ಗಡಿಪಾರು ಮಾಡುವಂತೆ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ವಿಚಾರಣೆ ನಡೆದು, ಎಂಟು ಜನರ ಗಡಿಪಾರಿಗೆ ಆದೇಶ ನೀಡಲಾಗಿದೆ. ಉಳಿದ 19 ಜನರ ಗಡಿಪಾರಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಗಡಿಪಾರಾಗಿರುವವರ ವಿವರ ಇಂತಿದೆ:
- ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಖಂತಿಜಾಪೂರ ನಿವಾಸಿ ರವಿ ಬಾಡಗಂಡಿಯನ್ನು ಒಂದು ವರ್ಷದವರೆಗೆ ಕಲಬುರಗಿ ಜಿಲ್ಲೆಯ ಸೇಡಂ ಠಾಣಾ ವ್ಯಾಪ್ತಿಗೆ.
- ಬಾಗೇವಾಡಿ ಠಾಣಾ ವ್ಯಾಪ್ತಿಯ ಮಹಮ್ಮದ್ ಹನೀಫ್ ಬಾಗವಾನ್ನನ್ನು ಆರು ತಿಂಗಳು ಶಿವಮೊಗ್ಗ ಜಿಲ್ಲೆಯ ಅನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಗೆ.
- ಮನಗೂಳಿ ಠಾಣಾ ವ್ಯಾಪ್ತಿಯ ರವಿ ನಂದಿಯನ್ನು ಆರು ತಿಂಗಳು ಚಾಮರಾಜನಗರ ಜಿಲ್ಲೆಯ ಯಳಂದೂರು ಠಾಣಾ ವ್ಯಾಪ್ತಿಗೆ.
- ಗೋಲಗುಮ್ಮಟ ಠಾಣಾ ವ್ಯಾಪ್ತಿಯ ಮಹಮ್ಮದ್ ಸಾಜೀದ್ ಇನಾಮದಾರನನ್ನು ಆರು ತಿಂಗಳು ಬೀದರ್ ಜಿಲ್ಲೆಯ ಭಾಲ್ಕಿ ಗ್ರಾಮೀಣ ಠಾಣಾ ವ್ಯಾಪ್ತಿಗೆ.
- ಜಮೀರ್ ಅಲಿಯಾಸ್ ಜಮೀರ್ ಅಹಮದ್ನನ್ನು ಮೂರು ತಿಂಗಳು ಬಳ್ಳಾರಿ ಜಿಲ್ಲೆಯ ಕುರುಗೋಡು ಠಾಣಾ ವ್ಯಾಪ್ತಿಗೆ.
- ಬಬಲೇಶ್ವರ ಠಾಣೆಯ ಹಣಮಂತಪ್ಪ ಹಳ್ಳಿಯನ್ನು ಮೂರು ತಿಂಗಳು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಠಾಣಾ ವ್ಯಾಪ್ತಿಗೆ.
- ಮುದ್ದೇಬಿಹಾಳ ಠಾಣಾ ವ್ಯಾಪ್ತಿಯ ಚೇತನ ಅಲಿಯಾಸ್ ಪವನ ಜತ್ತಿಯನ್ನು 6 ತಿಂಗಳು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟೆ ಠಾಣಾ ವ್ಯಾಪ್ತಿಗೆ.
- ನಿಡಗುಂದಿ ಠಾಣಾ ವ್ಯಾಪ್ತಿಯ ಯಮನಪ್ಪ ಅಲಿಯಾಸ್ ಪಾಂಡುವನ್ನು ಮೂರು ತಿಂಗಳು ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಠಾಣಾ ವ್ಯಾಪ್ತಿಗೆ.
ಈ ಕ್ರಮಗಳಿಂದ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.

