ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್‌ನಿಂದ ಭೀಕರ ಅಪಘಾತ: 100ಕ್ಕೂ ಹೆಚ್ಚು ಕುರಿಗಳ ದುರ್ಮರಣ

Spread the love

ಮುನಿರಾಬಾದ: ನಿಡಗುಂದಿಗೆ ಸಮೀಪದ ಬೇವಿನಹಳ್ಳಿಯ ಕಿರ್ಲೋಸ್ಕರ್ ಕಾರ್ಖಾನೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ನಡೆದ ಭೀಕರ ಅಪಘಾತದಲ್ಲಿ 100ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಟಿಪ್ಪರ್ ವಾಹನ ಕುರಿಗಳ ಹಿಂಡಿಗೆ ನುಗ್ಗಿದ್ದರಿಂದ ಈ ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ರಸ್ತೆ ತುಂಬೆಲ್ಲಾ ಕುರಿಗಳು ಚೆಲ್ಲಾಪಿಲ್ಲಿಯಾಗಿದ್ದವು.
ಪರಿಹಾರ ಭರವಸೆ, ಗ್ರಾಮಸ್ಥರ ಆಕ್ರೋಶ

ಈ ಕುರಿಗಳು ಬೇವಿನಹಳ್ಳಿ ಗ್ರಾಮದ ಚಿದಾನಂದಪ್ಪ ಮಲ್ಲಯ್ಯ ಮಡ್ಡಿ ಎಂಬವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸ್ಥಳಕ್ಕೆ ಭೇಟಿ ನೀಡಿ ಮೃತ ಕುರಿಗಳ ಮಾಲೀಕನಿಗೆ ಸಾಂತ್ವಾನ ಹೇಳಿದರು. ಸರ್ಕಾರದಿಂದ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ನೀಡಿದರು.

ಈ ಮಧ್ಯೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ ನಡೆಯುತ್ತಿರುವ ಅಪಘಾತಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬೇವಿನಹಳ್ಳಿ ಗ್ರಾಮಸ್ಥರು, ತಮ್ಮ ಗ್ರಾಮಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆ ಅಥವಾ ಮೇಲ್ಸೇತುವೆಯನ್ನು ತಕ್ಷಣ ನಿರ್ಮಿಸಿಕೊಡುವಂತೆ ಆಗ್ರಹಿಸಿದರು.

ಲೆಕ್ಕಾಚಾರದಲ್ಲಿ ತಡರಾತ್ರಿ
ಸಂಜೆ ವೇಳೆ ಅಪಘಾತ ಸಂಭವಿಸಿದ್ದರೂ, ತಡರಾತ್ರಿಯವರೆಗೆ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ಮೃತ ಕುರಿಗಳ ಲೆಕ್ಕ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಪಶುವೈದ್ಯಾಧಿಕಾರಿಗಳು ಮತ್ತು ಕುರಿಗಾರರ ನೆರವಿನೊಂದಿಗೆ ಈ ಲೆಕ್ಕಾಚಾರ ನಡೆಸಲಾಯಿತು. ಘಟನೆಯ ಪರಿಣಾಮವಾಗಿ ಒಂದು ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳೀಯರು ಟಿಪ್ಪರ್ ವಾಹನದ ಸಂಖ್ಯೆಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ವಿವರ ನೀಡಿದ್ದಾರೆ.

Leave a Reply

Your email address will not be published. Required fields are marked *