
ಕುಂದಗೋಳ: ಪಟ್ಟಣದಲ್ಲಿರುವ ಬಿ.ಡಿ. ತಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏಕ್ ಪ್ರಯಾಸ ಎಂಬ ಸಂಸ್ಥೆಯ ಬುದ್ಧಿಮಾಂದ್ಯ ಹಾಗೂ ಅಂಧ ನ್ಯೂನತೆವುಳ್ಳ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಮಯದಲ್ಲಿ ಮಾತನಾಡಿದ ತಾಲೂಕು ಕಾಂಗ್ರೆಸ್ ಎಸ್.ಟಿ. ಘಟಕದ ಅಧ್ಯಕ್ಷ ಹಾಗೂ ಸಂಶಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ನಾಯ್ಕರ, ವಿಶೇಷ ಚೇತನ ಮಕ್ಕಳ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಂಸ್ಥೆಯು ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು. ಇದರ ಅಡಿಯಲ್ಲಿ ಕುಂದಗೋಳ ತಾಲೂಕಿನಾದ್ಯಂತ ವಿಶೇಷ ಚೇತನ ಮಕ್ಕಳ ಸರ್ವೇ ಕಾರ್ಯವನ್ನು ನಡೆಸಿ, ಗುರುತಿಸಿದ ಚಿಕ್ಕ ಮಕ್ಕಳಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಕಾರ್ಯಕ್ರಮವು ವಿಶೇಷ ಚೇತನ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಗಿರಿಜಾ, ಗ್ಯಾರಂಟಿ ಅನುಷ್ಠಾನ ಹಾಗೂ ಗ್ರಾ.ಪಂ. ಸದಸ್ಯ ಇರ್ಷಾದ್ ಅಹ್ಮದ್ ಮುಲ್ಲಾ, ಸಂಯೋಜಕರಾದ ಶರಣಬಸಪ್ಪ ಮಾಸ್ತಮ್ಮನವರ, ಡಾ. ರಾಜೇಶ್ವರಿ ದಂಡಿನ, ಅಶ್ವಿನಿ ನಾಯ್ಕರ, ಕವಿತಾ ಶಿರುಂದೆ, ಭಾಗ್ಯಲಕ್ಷ್ಮೀ ಹಜಾರೆ ಸೇರಿದಂತೆ ಮಕ್ಕಳು ಮತ್ತು ಅವರ ಪಾಲಕರು ಉಪಸ್ಥಿತರಿದ್ದರು.

