
ಧಾರವಾಡ: ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಕುಂದಗೋಳ ತಾಲೂಕು ಮಟ್ಟದ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಗಳಿಗೆ ನೂತನವಾಗಿ ನೇಮಕಾತಿ ಮಾಡಿ ಧಾರವಾಡ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಆದೇಶದ ಪ್ರಕಾರ, ಸಮಿತಿಯ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀ ಶಿವಾನಂದ ಬೆಂತೂರ ಅವರ ಸ್ಥಾನಕ್ಕೆ ಹಿರೇಹರಕುಣಿ ಗ್ರಾಮದ ಸತೀಶ್ ಚನ್ನಬಸಯ್ಯ ಕೊಬ್ಬಯ್ಯನವರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇದೇ ವೇಳೆ, ಸಮಿತಿಯ ಸದಸ್ಯರಾಗಿದ್ದ ಹನುಮಂತಪ್ಪ ಯಲ್ಲಪ್ಪ ಹಗೇರಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಕಳಸ ಗ್ರಾಮದ ಸೋಮಲಿಂಗಪ್ಪ ಶಂಕ್ರಪ್ಪ ಹೊಸಮನಿ ಅವರನ್ನು ಸದಸ್ಯರನ್ನಾಗಿ ನೇಮಿಸಿ ಆದೇಶ ನೀಡಲಾಗಿದೆ.
ಈ ಆದೇಶವನ್ನು ಹೊರಡಿಸುವ ಅಧಿಕಾರವನ್ನು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಸರ್ಕಾರದ ಸುತ್ತೋಲೆಯ ಮೂಲಕ ನೀಡಲಾಗಿದ್ದು, ಅದರಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರಚಿಸಲಾದ ತಾಲೂಕು ಮಟ್ಟದ ಸಮಿತಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

