
ಬೆಂಗಳೂರು: ವೃಕ್ಷಮಾತೆ, ನಾಡೋಜ ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ. ಸಾಲುಮರದ ತಿಮ್ಮಕ್ಕ ಅವರ ನಿಧನ ಹಿನ್ನೆಲೆಯಲ್ಲಿ ಶನಿವಾರ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಲಾಗಿದೆ ಎಂಬ ನಕಲಿ ಆದೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ, ಕರ್ನಾಟಕ ಸರ್ಕಾರ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ರಾಜ್ಯಾದ್ಯಂತ ಯಾವುದೇ ಸರ್ಕಾರಿ ರಜೆ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ವೈರಲ್ ಆದೇಶ ಪತ್ರವು ನಿಜವಾದದ್ದಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಅದು ಮಾಜಿ ಸಚಿವ ಎಸ್. ಎಂ. ಕೃಷ್ಣ ಅವರ ನಿಧನದ ಸಂದರ್ಭದಲ್ಲಿ ಹೊರಡಿಸಲಾಗಿದ್ದ ಆದೇಶವನ್ನು ತಿದ್ದುಪಡಿ ಮಾಡಿ ಬಳಕೆ ಮಾಡಿದ ನಕಲಿ ಪ್ರತಿಯಾಗಿದೆ ಎಂದು ತಿಳಿಸಿದೆ. ಅಲ್ಲದೇ, ಆ ವೈರಲ್ ಆದೇಶದ ಕೆಳಭಾಗದಲ್ಲಿ ಸಹಿ ಮಾಡಿರುವ ಅಧಿಕಾರಿಯು ಪ್ರಸ್ತುತ ಆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರ ಇಂದು ಹೊರಡಿಸಿದ ಅಧಿಕೃತ ಪತ್ರದಲ್ಲಿ, ವೃಕ್ಷಮಾತೆ ಹಾಗೂ ಪರಿಸರ ರಾಯಭಾರಿ ಡಾ. ಸಾಲುಮರದ ತಿಮ್ಮಕ್ಕ (ನಿಧನ: 14-11-2025) ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ದಿವಂಗತರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸರ್ಕಾರ ಆದೇಶಿಸಿದೆ. ಆದರೆ ರಾಜ್ಯಾದ್ಯಂತ ಸಾರ್ವಜನಿಕ ರಜೆ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

