
ನವಲಗುಂದ: ಸ್ವಾತಂತ್ರ್ಯ ಹೋರಾಟಗಾರ್ತಿ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಸರ್ಕಾರವು ಶುಕ್ರವಾರ (ನಾಳೆ) ‘ಅಂಚೆ ಚೀಟಿ’ ಬಿಡುಗಡೆ ಮಾಡುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ ಕನ್ನಡ ನಾಡಿನ ಹೆಮ್ಮೆಯ ಮಗಳು. ಪ್ರತಿಯೊಬ್ಬ ಕನ್ನಡಿಗರೂ ಧನ್ಯತೆಯ ಭಾವದಿಂದ ಸ್ಮರಿಸುವ ಚನ್ನಮ್ಮನ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ಪ್ರಧಾನ ಮಂತ್ರಿಗಳು ನಿರ್ಧರಿಸಿರುವುದು, ಓರ್ವ ವೀರ ಮಹಿಳೆಗೆ ನೀಡಿದ ಅತ್ಯುನ್ನತ ಗೌರವವಾಗಿದೆ ಎಂದು ತಿಳಿಸಿದ್ದಾರೆ.
ಇಂತಹ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾವೂ ವೈಯಕ್ತಿಕವಾಗಿ ಮತ್ತು ಸಮಸ್ತ ಸಮಾಜದ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿರುವುದಾಗಿ ಮುನೇನಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಅಂಚೆ ಚೀಟಿ ಬಿಡುಗಡೆಯು ದೇಶದಾದ್ಯಂತ ಚನ್ನಮ್ಮನವರ ಹೋರಾಟದ ಕಿಚ್ಚನ್ನು ಹರಡಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

