
ಪಿರಿಯಾಪಟ್ಟಣ/ಮೈಸೂರು: ಜಮೀನು ಹಂಚಿಕೆ ವಿಚಾರದಲ್ಲಿ ಉಂಟಾದ ವಿವಾದದಿಂದ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಅಂಬಲಾರೆ ಗ್ರಾಮದಲ್ಲಿ ನಡೆದಿದೆ. ಈ ಗಲಾಟೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಕಲ್ಲು ಮತ್ತು ದೊಣ್ಣೆಗಳನ್ನು ಹಿಡಿದು ಪರಸ್ಪರ ಹೊಡೆದಾಡಿಕೊಂಡ ಎರಡೂ ಗುಂಪುಗಳಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಭಾಗಿಯಾಗಿದ್ದರು. ಗಾಯಗೊಂಡವರನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ
ಜಮೀನು ಉಳುಮೆ ಮಾಡಲು ಹೋದಾಗ ಗಲಾಟೆ ಆರಂಭವಾಗಿದ್ದು, ಒಂದು ಗುಂಪು ಉಳುಮೆ ಮಾಡುವುದನ್ನು ತಡೆದಿದೆ. ಇದರಿಂದ ರೊಚ್ಚಿಗೆದ್ದ ಎರಡು ಕಡೆಯವರು ನಡು ರಸ್ತೆಯಲ್ಲೇ ಹೊಡೆದಾಡಿದ್ದಾರೆ. ಸುತ್ತಮುತ್ತಲಿನ ಜನರು ಮೂಕ ಪ್ರೇಕ್ಷಕರಂತೆ ನಿಂತು ಈ ಘಟನೆಯನ್ನು ನೋಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

