
ಕುಂದಗೋಳದಲ್ಲಿ ಭಗತ್ ಸಿಂಗ್ ಯುವ ಸೇನೆಯಿಂದ ಸ್ವಾತಂತ್ರ್ಯೋತ್ಸವ: ಶಾಸಕ ಎಂ.ಆರ್. ಪಾಟೀಲ್ ಧ್ವಜಾರೋಹಣ
ಕುಂದಗೋಳ: ಪಟ್ಟಣದ ಕ್ರಾಂತಿಕಾರಿ ಭಗತ್ ಸಿಂಗ್ ಯುವ ಸೇನೆಯ ವತಿಯಿಂದ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕುಂದಗೋಳ ಮತಕ್ಷೇತ್ರದ ಶಾಸಕ ಎಂ.ಆರ್. ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಹೋರಾಟಗಾರರನ್ನು ಸ್ಮರಿಸಿದರು.
ಕಾರ್ಯಕ್ರಮದ ನಂತರ ಮಾತನಾಡಿದ ಶಾಸಕ ಎಂ.ಆರ್. ಪಾಟೀಲ್, “ಕ್ರಾಂತಿಕಾರಿ ಭಗತ್ ಸಿಂಗ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಯೌವನವನ್ನು ಅರ್ಪಿಸಿದರು. ಅವರಂತಹ ಮಹಾನ್ ನಾಯಕರ ಆದರ್ಶ ತತ್ವಗಳನ್ನು ಇಂದಿನ ಯುವಕರು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು” ಎಂದು ಕರೆ ನೀಡಿದರು.
ಸಮಾರಂಭದ ಅಂಗವಾಗಿ ಯುವ ಸೇನೆಯ ಸದಸ್ಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಸಿದರು. ರಾಷ್ಟ್ರಧ್ವಜಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಸಾಗಿದ ಯುವಕರ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಾಜು ಮಾವರಕ, ಬಿಜೆಪಿ ಯುವ ಮುಖಂಡ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಪಪಂ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ, ಚಿದಾನಂದ ಭೈರಪ್ಪನವರ, ವಿಕಾಸ ಕಿರೇಸೂರ, ಆನಂದ ಕಟಗಿ, ಪ್ರವೀಣ ಕಿರೇಸೂರ, ಹರೀಶ ಕೊನೇರಿ, ಗೌಡಪ್ಪ ಅವಾರಿ, ಹಾಗೂ ಕ್ರಾಂತಿಕಾರಿ ಭಗತ್ ಸಿಂಗ್ ಯುವ ಸೇನೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

